ವಿಟ್ಲ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ಜನ್ಮ ಷಷ್ಠ್ಯಬ್ದ ಪ್ರಯುಕ್ತ ವಿಟ್ಲ ಷಷ್ಠ್ಯಬ್ದ ಸಂಭ್ರಮ ಸಮಿತಿ, ವಿಟ್ಲ ರೋಟರಿ ಕ್ಲಬ್ ಮತ್ತು ಜೇಸಿಐ ಸಹಯೋಗದಲ್ಲಿ ಪುತ್ತೂರು ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ವತಿಯಿಂದ ರಕ್ತದಾನ ಶಿಬಿರ ವಿಟ್ಲ ಪುಷ್ಪಕ್ ಹೆಲ್ತ್ ಸೆಂಟರ್ ನಲ್ಲಿ ಭಾನುವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ, ಆಶೀರ್ವಚನ ನೀಡಿದ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಸಂಘ ಸಂಸ್ಥೆಗಳು ನಿರಂತರ ಜನಪರ ಕಾರ್ಯಕ್ರಮಗಳು ನಡೆಸುತ್ತಿದೆ. ಜನಪರ ಕೆಲಸ ಮಾಡುವವರ ಮೇಲೆ ಭಗವಂತನ ಅನುಗ್ರಹ ಇರುತ್ತದೆ. ಇಂತಹ ಕಾರ್ಯಕ್ರಮಗಳ ಮೂಲಕ ದುಶ್ಚಟ ಮುಕ್ತ ಸಮಾಜ ನಿರ್ಮಾಣಗೊಳ್ಳುತ್ತದೆ ಎಂದರು.
ವೈದ್ಯರ ಮೇಲೆ ವಿಶ್ವಾಸ ಇಟ್ಟಾಗ ಒಳಿತಾಗುತ್ತದೆ. ಎಲ್ಲೆಡೆ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕು. ರೋಗ ಬರುವ ಮೊದಲು ಎಚ್ಚೆತ್ತುಕೊಂಡಾಗ ಯಾವುದೇ ಸಮಸ್ಯೆಗಳು ಇರುವುದಿಲ್ಲ. ಉತ್ತಮ ಆಹಾರದಿಂದ ಆರೋಗ್ಯವಂತರಾಗಿ ಜೀವಿಸಲು ಸಾಧ್ಯವಿದೆ. ಜೀವದಾನಕ್ಕೆ ಶ್ರೇಷ್ಠತೆ ಇದೆ. ಒಂದು ಬಿಂದು ರಕ್ತವು ಅಮೂಲ್ಯವಾದುದು. ರಕ್ತದಾನ ಶ್ರೇಷ್ಠದಾನವಾಗಿದೆ ಎಂದರು.
ಸಾದ್ವೀ ಮಾತಾನಂದ ಮಯೀ ಆಶೀರ್ವಚನ ನೀಡಿ ಯಾವುದೇ ಒಂದು ಕಾರ್ಯದ ಮಾಡುವಾಗ ಶ್ರದ್ಧೆ ಬೇಕು. ಶ್ರದ್ಧೆಯಿಂದ ಮಾಡಿದ ಕಾರ್ಯ ಯಶಸ್ಸಿಯಾಗುತ್ತದೆ. ಡಾ. ವಿ.ಕೆ ಹೆಗ್ಡೆಯವರು ಕೊರೊನಾ ಸಂದರ್ಭ ನಿಸ್ವಾರ್ಥ ಸೇವೆ ಮಾಡುವ ಮೂಲಕ ಜನಮನ್ನಣೆಗಳಿಸಿದ್ದಾರೆ ಎಂದರು.
ವಿಟ್ಲ ರೋಟರಿ ಅಧ್ಯಕ್ಷ ಕೃಷ್ಣ ಭಟ್, ವಿಟ್ಲ ಜೇಸಿಐ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ವಿಟ್ಲ ಷಷ್ಠ್ಯಬ್ದ ಸಂಭ್ರಮ ಸಮಿತಿ ಅಧ್ಯಕ್ಷ ಮೋನಪ್ಪ ಗೌಡ, ಪ್ರವೀಣಾ ಹೆಗ್ಡೆ ಉಪಸ್ಥಿತರಿದ್ದರು.
ಡಾ.ವಿ.ಕೆ ಹೆಗ್ಡೆ, ಸ್ವಾಗತಿಸಿದರು. ಯಶವಂತ ವಿಟ್ಲ ನಿರೂಪಿಸಿದರು.