ಬಂಟ್ವಾಳ: ಬಂಟ್ವಾಳ ತಾಲೂಕಿನ ಮೂಡನಡುಗೋಡು ಗ್ರಾಮದ ಕರೆಂಕಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪುನಃ ನವೀಕರಣ, ಬ್ರಹ್ಮಕಲಶೋತ್ಸವವು ವಿವಿಧ ಧಾರ್ಮಿಕ, ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಫೆ. 12ರಿಂದ 17ರ ವರೆಗೆ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವದ ಪ್ರಚಾರ-ಮಾಧ್ಯಮ ಸಮಿತಿಯ ಸಂಚಾಲಕ ಮನ್ಮಥ್ ಜೆ. ಶೆಟ್ಟಿ ಪುತ್ತೂರು ಕರೆಂಕಿ ಕ್ಷೇತ್ರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಕರೆಂಕಿ ಕ್ಷೇತ್ರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ತಾಮ್ರದ ಹೊದಿಕೆ, ಗರ್ಭಗುಡಿ, ಸುತ್ತುಪೌಳಿಯ ಸಣ್ಣಪುಟ್ಟ ಕೆಲಸಗಳು ಸೇರಿದಂತೆ ಸುಮಾರು 75 ಲಕ್ಷ ರೂ.ಗಳ ಅಭಿವೃದ್ಧಿ ಕಾರ್ಯ ನಡೆದಿದ್ದು, ವಿಜ್ರಂಭಣೆಯ ಬ್ರಹ್ಮಕಲಶೋತ್ಸವಕ್ಕೆ ಸಿದ್ಧತೆ ನಡೆದಿದೆ ಎಂದರು.
ಫೆ.12 ರಂದು ಬಂಟ್ವಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಯೊಂದಿಗೆ ಸಂಭ್ರಮಕ್ಕೆ ಚಾಲನೆ ಸಿಗಲಿದೆ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ರವರು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.ವಿವಿಧ ಭಜನಾ ತಂಡಗಳಿಂದ ಭಜನೆ ನಡೆಯಲಿದೆ.
ಫೆ.17 ರಂದು ಬೆಳಗ್ಗೆ ಚಂಡಿಕಾ ಹೋಮ ಪ್ರಾರಂಭಗೊಳ್ಳಲಿದ್ದು, ಶ್ರೀ ದೇವರ ಪ್ರತಿಷ್ಠೆ, ಪರಿವಾರ ದೇವರ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಪ್ರತಿದಿನ ಧಾರ್ಮಿಕ ಸಭೆ ನಡೆಯಲಿದ್ದು, ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ, ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ, ಸಾಧ್ವಿ ಶ್ರೀ ಮಾತಾನಂದಮಯಿ, ಕೇಮಾರಿನ ಶ್ರೀ ಈಶ ವಿಠಲದಾಸ ಸ್ವಾಮೀ, ಜಿಲ್ಲೆಯ ಸಚಿವರು, ಸಂಸದರು, ಶಾಸಕರು, ಮಾಜಿ ಸಚಿವರು ಮೊದಲಾದ ಗಣ್ಯರು ಪಾಲ್ಗೊಳ್ಳಲಿದ್ದು, ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಕಲಶ ಸಮಿತಿಯ ಅಧ್ಯಕ್ಷ ಧರ್ಣಪ್ಪ ಪೂಜಾರಿ ರಾಮನಗರ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಮಚಂದ್ರ ಶೆಟ್ಟಿ ದಂಡೆ, ಉಪಾಧ್ಯಕ್ಷ ಕರುಣೇಂದ್ರ ಪೂಜಾರಿ ಕೊಂಬರಬೈಲು, ಆಡಳಿತ ಸಮಿತಿಯ ಅಧ್ಯಕ್ಷ ನಾರಾಯಣ ಗೌಡ ಕರೆಂಕಿ, ಉಪಾಧ್ಯಕ್ಷ ಪೂವಪ್ಪ ಮೆಂಡನ್ ಕರೆಂಕಿ, ಪ್ರಧಾನ ಕಾರ್ಯದರ್ಶಿ ಮನೋಜ್ಕುಮಾರ್ ಕರೆಂಕಿ, ಪ್ರಮುಖರಾದ ದಿನೇಶ್ ಪೂಜಾರಿ ಜ್ಯೋತಿಗುಡ್ಡೆ, ವಿಠಲ ಡಿ, ಸಂತೋಷ್, ಧನರಾಜ್, ಅವಿನಾಶ್, ನಾಗೇಶ್ ಉಪಸ್ಥಿತರಿದ್ದರು.