ಮಂಗಳೂರು: ಬಜಾಲ್ ನಿವಾಸಿಯೊಬ್ಬರ ದನದ ಕೊಟ್ಟಿಗೆಗೆ ನುಗ್ಗಿ ದನ ಕಳವುಗೈದ ಐವರು ಖದೀಮರನ್ನು ನಗರ ಠಾಣೆಯ ಪೋಲಿಸರು ಬಂಧಿಸಿದ್ದಾರೆ.

ಗುರುನಗರ ನಿವಾಸಿ ಮಹಮ್ಮದ್ ಆಶ್ಚಕ್ ಅಲಿಯಾಸ್ ಶಮೀರ್ ಅಲಿಯಾಸ್ ಚಮ್ಮಿ (22), ಗುರುಪುರ ನಿವಾಸಿ ಅಜರುದ್ದೀನ್ ಅಲಿಯಾಸ್ ಅಜರ್ ( 31 ) ಚೆಲ್ಲಿಗುಡ್ಡೆ ನಿವಾಸಿ ಸುಹೈಲ್ (19), ಬಜಾಲ್ ಪಕ್ಕಲಡ್ಕ ನಿವಾಸಿ ಮೊಹಮ್ಮದ್ ಆಫೀದ್ (25), ಕಟ್ಟಪಣಿ ಬಜಾಲ್ ನಿವಾಸಿ ಶಾಹೀದ್ ಅಲಿಯಾಸ್ ಚಾಯಿ (19) ಬಂಧಿತ ಆರೋಪಿಗಳು.

ಕಂಕನಾಡಿ ನಗರ ಠಾಣಾ ವ್ಯಾಪ್ತಿಯ ಬಜಾಲ್ ಗ್ರಾಮದ ದೋಟ ಹೌಸ್ ಕಾನೆಕರಿಯ ಎಂಬಲ್ಲಿ ಅಶ್ವಿನ್ ಎಂಬವರು ದನಕರುಗಳನ್ನು ಸಾಕಿಕೊಂಡಿದ್ದು, ಜು.20 ರಂದು ಸಂಜೆ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದರು.

ಜು.21ರಂದು ಮುಂಜಾನೆ ಹಸು ಕೂಗಿದ ಶಬ್ದ ಕೇಳಿ ಮನೆಯವರು ಹೊರಗೆ ಬಂದು ದನದ ಕೊಟ್ಟಿಗೆಯ ಬಳಿ ಬಂದು ನೋಡಿದಾಗ ಒಂದು ಹಸು ಹೊರಗೆ ನಿಂತುಕೊಂಡಿದ್ದು ಕೊರಳಿಗೆ ಹಗ್ಗ ಕಟ್ಟಿಕೊಂಡಿದ್ದು, ಬಳಿಕ ಮನೆಯವರು ಕೊಟ್ಟಿಗೆಯೊಳಗೆ ನೋಡಿದಾಗ ಕೊಟ್ಟಿಗೆಯಲ್ಲಿದ್ದ ಬಿಳಿ ಕಂದು ಮಿಶ್ರಿತ ಬಣ್ಣದ ದೊಡ್ಡ ಹಸು ಕಾಣೆಯಾಗಿದ್ದು, ಸುತ್ತಮುತ್ತ ಪರಿಸರದಲ್ಲಿ ಹುಡುಕಾಡಿದರೂ ಎಲ್ಲಿಯೂ ಪತ್ತೆಯಾಗದೇ ಇದ್ದು, ಈ ಹಸುವನ್ನು ಯಾರೋ ಕಳ್ಳರು ಕದ್ದುಕೊಂಡು ಹೋಗಿರುವ ಬಗ್ಗೆ ಕಂಕನಾಡಿ ಠಾಣೆಗೆ ದೂರು ನೀಡಿದ್ದರು.
ಅಶ್ವಿನ್ ಅವರು ನೀಡಿದ ದೂರಿನಂತೆ ಅ.ಕ್ರ 82/2022 ಕಲಂ 457, 380 ಐಪಿಸಿ ಯಂತೆ ಕಂಕನಾಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದ ತನಿಖೆ ಮುಂದುವರಿಸಿದ ಕಂಕನಾಡಿ ಪೋಲಿಸರು ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪೈಕಿ ಅಜರುದ್ದೀನ್ ವಿರುದ್ಧ ಬಜಪೆ ಪೊಲೀಸ್ ಠಾಣೆಯಲ್ಲಿ 185/2010 ಕಲಂ 395 ಐಪಿಸಿ ಪ್ರಕರಣ ಹಾಗೂ ಮೊಹಮ್ಮದ್ ಅಫ್ರೀದ್ ವಿರುದ್ಧ ಕಂಕನಾಡಿ ನಗರ ಪೊಲೀಸು ಠಾಣಾ ಮೊ.ನಂ 88/2022 ಕಲಂ 353 ಜೊತೆಗೆ 34 ಐಪಿಸಿ ಪ್ರಕರಣ ದಾಖಲಾಗಿರುವ ಬಗ್ಗೆ ಪೋಲಿಸರು ಮಾಹಿತಿ ನೀಡಿದ್ದಾರೆ
ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಮಾರುತಿ ಕಾರು, ಕತ್ತಿ ಹಾಗೂ ಹಗ್ಗಗಳನ್ನು ವಶಕ್ಕೆ ಪಡೆಯಲಾಗಿದ್ದು, ಪೋಲಿಸರು ತನಿಖೆ ಮುಂದುವರೆಸಿದ್ದಾರೆ.
