ಪುತ್ತೂರು: ಎರಡು ದಿನಗಳಿಂದ ಊಟ ಮಾಡದೆ ಹಸಿವಿನಿಂದ ಕಂಗಲಾಗಿದ್ದ ಮಡಿಕೇರಿ ಮೂಲದ ವ್ಯಕ್ತಿಗೆ ಸಂಟ್ಯಾರು ಚೆಕ್ ಪಾಯಿಂಟ್ ಕರ್ತವ್ಯದಲ್ಲಿದ್ದ ಠಾಣಾ ಸಿಬ್ಬಂದಿಗಳು ತಮಗಾಗಿ ಮನೆಯಿಂದ ತಂದಿದ್ದ ಊಟ ನೀಡಿ ಮಾನವೀಯತೆ ಮೆರೆದ ಘಟನೆ ಸಂಟ್ಯಾರ್ ನಲ್ಲಿ ನಡೆದಿದೆ.
ಮಡಿಕೇರಿಯ ರಾಣಿಪೇಟೆ ನಿವಾಸಿಯೊಬ್ಬರು ಕಳೆದ 5 ದಿನಗಳ ಹಿಂದೆ ಕೆಲಸಕ್ಕೆಂದು ಮಂಗಳೂರಿಗೆ ಬಂದು ಲಾಕ್ಡೌನ್ ಪರಿಣಾಮ ಕೆಲಸವಿಲ್ಲದೆ ಊರಿಗೆ ಮರಳಲು ಬಸ್ಸಿನ ಸೌಕರ್ಯವೂ ಇಲ್ಲದೆ ಮಂಗಳೂರಿನಿಂದ ಮಡಿಕೇರಿಗೆ ನಡೆದುಕೊಂಡು ತೆರಳುತ್ತಿರುವುದಾಗಿ,
ಹಾಗೂ ಎರಡು ದಿನಗಳಿಂದ ಊಟ ಮಾಡದೆ ಹಸಿವಿನಿಂದ ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಸಂಟ್ಯಾರು ಎಂಬಲ್ಲಿ ಬಾವಲಿ ಹಾಗೂ ಹಕ್ಕಿಗಳು ತಿಂದು ಬಿದ್ದಂತಹ ಮಾವಿನ ಹಣ್ಣನ್ನು ತಿನ್ನುತ್ತಿರುವ ಬಗ್ಗೆ ಪತ್ರಕರ್ತರೊಬ್ಬರಿಂದ ಮಾಹಿತಿ ತಿಳಿದ ಪುತ್ತೂರು ಸಂಟ್ಯಾರು ಚೆಕ್ ಪಾಯಿಂಟ್ ಕರ್ತವ್ಯದಲ್ಲಿದ್ದ ಠಾಣಾ ಸಿಬ್ಬಂದಿ ದಯಾನಂದ ಹಾಗೂ ಕಿರಣ್ ರವರು ಕೂಡಲೇ ಸ್ಪಂದಿಸಿದ್ದಾರೆ.
ಹಸಿವಿನಿಂದ ಕಂಗಾಲಾಗಿದ್ದ ವ್ಯಕ್ತಿಗೆ ಸಿಬ್ಬಂದಿಯವರು ತಮಗಾಗಿ ಮನೆಯಿಂದ ಮಧ್ಯಾಹ್ನದ ಊಟಕ್ಕೆಂದು ತಂದ ಆಹಾರವನ್ನು ನೀಡಿ ಬಳಿಕ ಒಂದು ವಾಹನದಲ್ಲಿ ಆ ವ್ಯಕ್ತಿಯನ್ನು ಮಡಿಕೇರಿಗೆ ಕಳುಹಿಸಿಕೊಟ್ಟಿದ್ದಾರೆ.
ಲಾಕ್ ಡೌನ್ ನಂತಹ ಸಂಕಷ್ಟ ಸಮಯದಲ್ಲಿ ತಮ್ಮ ಕರ್ತವ್ಯದೊಂದಿಗೆ ಮಾನವೀಯತೆಯನ್ನು ಮೆರೆದ ಈ ಸಿಬ್ಬಂದಿಗಳ ಕಾರ್ಯ ಎಲ್ಲರಿಗೂ ಆದರ್ಶನೀಯವಾಗಿದೆ