Sunday, June 29, 2025
spot_imgspot_img
spot_imgspot_img

‘ನಕಲಿ ಗಾಂಧಿ ಕುಟುಂಬಕ್ಕೆ ಅಧಿಕಾರ ನೀಡಲು ಕಾಂಗ್ರೆಸ್ಸಿಗರ ಪಾದಯಾತ್ರೆ’-ಕಟೀಲು ಟೀಕೆ

- Advertisement -
- Advertisement -

ನಕಲಿ ಗಾಂಧಿ ಕುಟುಂಬಕ್ಕೆ ಅಧಿಕಾರ ನೀಡಲು ಕಾಂಗ್ರೆಸ್‌ ಕಾರ್ಯಕರ್ತರು ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಟೀಕಿಸಿದ್ದಾರೆ.

ರಾಹುಲ್ ಗಾಂಧಿ ನೇತೃತ್ವದ ಭಾರತ್‌ ಜೋಡೊ ಯಾತ್ರೆ ವಿರುದ್ಧ ಸರಣಿ ಟ್ವೀಟ್‌ ಮಾಡಿರುವ ಅವರು, ಪಕ್ಷ ಕಟ್ಟಿ ಬೆಳೆಸಿದ ಹಿರಿಯರು ಪಕ್ಷಕ್ಕೆ ಭವಿಷ್ಯ ಇಲ್ಲ ಎಂದು ಒಬ್ಬೊಬ್ಬರಾಗಿ ರಾಜೀನಾಮೆ ಕೊಟ್ಟು ಹೊರಗೆ ಹೋಗುತ್ತಿದ್ದಾರೆ. ಅದನ್ನು ಸರಿ ಮಾಡುವುದು ಬಿಟ್ಟು ದೇಶಕ್ಕೆ ಭವಿಷ್ಯ ಕೊಡುತ್ತೇನೆ ಎಂದು ರಾಹುಲ್‌ ಗಾಂಧಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ನಕಲಿ ಗಾಂಧಿ ಕುಟುಂಬಕ್ಕೆ ಅಧಿಕಾರ ನೀಡಲು ಕಾಂಗ್ರೆಸ್ ಕಾರ್ಯಕರ್ತರು ಪಾದಯಾತ್ರೆ ಮಾಡುತ್ತಿದ್ದಾರೆ. ಪಕ್ಷದ ಹಿರಿಯರಾದ ಮಾಧವರಾವ್ ಸಿಂಧಿಯಾ, ರಾಜೇಶ್ ಪೈಲೆಟ್ ಸಹಿತ ಅನೇಕ ನೈಜ ಮುಖಂಡರ ಅಂತ್ಯದ ಹಿಂದೆ ಯಾರ ಕೈವಾಡ ಇದೆ ಎಂದು ರಾಹುಲ್‌ಗೆ ಕಾರ್ಯಕರ್ತರು ಪ್ರಶ್ನಿಸಲಿ. ಅವರಿಂದ ಸಮರ್ಪಕ ಉತ್ತರ ಸಿಕ್ಕರೆ ಮಾತ್ರ ಕಾರ್ಯಕರ್ತರು ಹೆಜ್ಜೆ ಹಾಕಲಿ. ಈ ಆತ್ಮವಂಚನೆಯ ಪಾದಯಾತ್ರೆ ಯಾಕೆ ಎಂದು ಪ್ರಶ್ನಿಸಿದ್ದಾರೆ.

ರಾಜಸ್ಥಾನದಲ್ಲಿ ಕಾಂಗ್ರೆಸ್ಸಿನ ಯುವನಾಯಕ ಸಚಿನ್ ಪೈಲೆಟ್ ಅವರನ್ನು ಸಿಎಂ ಮಾಡುತ್ತೇನೆ ಎಂದು ರಾಹುಲ್‌ ಭರವಸೆ ನೀಡಿದ್ದರು. ಯಾರದ್ದೋ ಬ್ಲ್ಯಾಕ್ ಮೇಲ್‌ಗೆ ಹೆದರಿ ಈ ಭರವಸೆಯನ್ನು ಹಿಂಪಡೆದುಕೊಂಡರು. ರಾಹುಲ್‌ ಅವರಿಗೆ ತಮ್ಮ ಪಕ್ಷದಲ್ಲಿಯೇ ಯುವಕರಿಗೆ ಸ್ಥಾನಮಾನ ಕೊಡಲು ಸಾಧ್ಯವಾಗುತ್ತಿಲ್ಲ. ಹಾಗಿರುವಾಗ‌ ದೇಶದ ಯುವ ಜನಾಂಗಕ್ಕೆ ಅವರು ಯಾವ ಭವಿಷ್ಯ ನೀಡಬಲ್ಲರು ಎಂದು ನಳಿನ್‌ಕುಮಾರ್‍ ಕಟೀಲ್ ಕೇಳಿದ್ದಾರೆ.

- Advertisement -

Related news

error: Content is protected !!