Saturday, April 27, 2024
spot_imgspot_img
spot_imgspot_img

ಅಮ್ಮ ಕಲಾವಿದರು ಬಹರೈನ್ ವತಿಯಿಂದ ಸತ್ಯ ನಾರಾಯಣ ಪೂಜಾ ಮಹೋತ್ಸವ – ಭಕ್ತಿಪರವಶರಾದ ಭಕ್ತಜನ ವೃಂದ

- Advertisement -G L Acharya panikkar
- Advertisement -

ಬಹರೈನ್ : ಅಮ್ಮ ಕಲಾವಿದರು ಬಹರೈನ್ ಆಯೋಜನೆಯಲ್ಲಿ ಕನ್ನಡ ಸಂಘ ಬಹರೈನ್ ಆಶ್ರಯದಲ್ಲಿ ಕಳೆದ ಶುಕ್ರವಾರ ತಾ. 27 ರ ಜನವರಿಯಂದು ವೇದಮೂರ್ತಿ ಕಿಳಿಂಗಾರು ಕುಮಾರ ಸುಬ್ರಮಣ್ಯ ಭಟ್ ಪೌರೋಹಿತ್ಯದಲ್ಲಿ ಸತ್ಯನಾರಾಯಣ ಪೂಜೆ, ವಿವಿಧ ಕಾರ್ಯಕ್ರಮಗಳೊಂದಿಗೆ ಮನಾಮದ ನೂತನ ಕನ್ನಡ ಭವನ ಸಭಾಂಗಣದಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.

ಸಾವಿರಾರು ಮಂದಿ ಭಕ್ತಜನ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಕ್ತಿ ಪರವಶರಾದರು. ತಾಯ್ನಾಡಿಂದ ಆಗಮಿಸಿದ್ದ ಮಾಣಿಲ ಶ್ರೀಧಾಮದ ಪರಮಹಂಸ ಶ್ರೀ ಮೋಹನದಾಸ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ವಿಶೇಷ ಆಕರ್ಷಣೆಯಾಗಿ ತಾಯ್ನಾಡ ಖ್ಯಾತ ಸ್ಯಾಕ್ಸೋಫೋನ್ ವಾದಕ ಕರ್ನಾಟಕ ಕಲಾಶ್ರೀ, ನಾದ ವಿಶಾರದ ಡಾ.ಪಿ.ಕೆ.ದಾಮೋದರ್, ಬಾಲ ಪ್ರತಿಭೆ ಮಾ.ಚಿಂತನ್ ಪುರುಷೋತ್ತಮ್ ಸ್ಯಾಕ್ಸೋಫೋನ್ ವಾದನವನ್ನು ನಡೆಸಿಕೊಟ್ಟರು‌. ತವಿಲ್ ನಲ್ಲಿ ಮನುರಾಜ್ ಬಿ.,‌ ತಬಲಾದಲ್ಲಿ ಪ್ರವೀಣ್ ಜೋಗಿ ಸಾಥ್ ನೀಡಿದರು. ಹಾಗೂ ಸ್ಥಳೀಯ ನೂರಾರು ಭಜಕ ಮಕ್ಕಳು, ಮಹಿಳೆಯರು, ಪುರುಷ ತಂಡಗಳಾಗಿ ನಡೆಸಿಕೊಟ್ಟ ಕುಣಿತ ಭಜನೆ ಆಕರ್ಷಕವಾಗಿ ಮೂಡಿಬಂತು‌.

ತಾಯ್ನಾಡಿಂದ ಆಗಮಿಸಿದ್ದ ಪುರೋಹಿತರಾದ ವೇದಮೂರ್ತಿ ಕಿಳಿಂಗಾರು ನಡುಮನೆ ಕುಮಾರ ಸುಬ್ರಮಣ್ಯ ಭಟ್ ಸತ್ಯನಾರಾಯಣ ಪೂಜೆಯನ್ನು ನಡೆಸಿಕೊಟ್ಟರು. ಗಣೇಶ್ ಭಟ್, ಹರಿನಾರಾಯಣ ಭಟ್ ಮತ್ತು ರಾಮ್ ಪ್ರಸಾದ್ ಅಮ್ಮೆನಡ್ಕ ಪೂಜಾ ಪರಿಚಾರಕರಾಗಿ ಸಹಕರಿಸಿದರು. ಕಲಿಯುಗದಲ್ಲಿ ಭಗವನ್ನಾಮ ಸ್ಮರಣೆಯನ್ನು ಭಜನೆಯನ್ನು ಮಾಡುವುದರೊಂದಿಗೆ ಪ್ರತಿಯೊಬ್ಬರೂ ಜೀವನ ಸಾರ್ಥಕ ಪಡಿಸಿಕೊಳ್ಳಬೇಕಾಗಿದೆ ಎಂದು ಮಾಣಿಲ ಸ್ವಾಮೀಜಿಯವರು ತಮ್ಮ ಅನುಗ್ರಹ ಭಾಷಣದ ಮೂಲಕ ನೆರದ ಜನರನ್ನು ಮಂತ್ರಾಕ್ಷತೆಯೊಂದಿಗೆ ಆಶೀರ್ವದಿಸಿದರು. ಇದೇ ಸಂದರ್ಭದಲ್ಲಿ ಈ ಕಾರ್ಯಕ್ರಮದ ಅನ್ನದಾನದ ಪ್ರಾಯೋಜಕರಾದ ಸುಭಾಶ್ಚಂದ್ರ ಇವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.

ಕನ್ನಡ ಸಂಘದ ಅಧ್ಯಕ್ಷ ಪ್ರದೀಪ್ ಶೆಟ್ಟಿ, ರಾಜ್ಯಪ್ರಶಸ್ತಿ ವಿಜೇತ ಕನ್ನಡಿಗ ರಾಜ್ ಕುಮಾರ್, ಹಿರಿಯ ಕನ್ನಡಿಗ ಅಮರನಾಥ್ ರೈ,‌ ನಾದವಿಶಾರದ ಡಾ.ಪಿ.ಕೆ‌.ದಾಮೋದರ್ ಮತ್ತು ಬಳಗ, ಪುರೋಹಿತ ವೇ.ಮೂ. ಕುಮಾರ ಸುಬ್ರಮಣ್ಯ ಕಿಳಿಂಗಾರು ನಡುಮನೆ, ತಾಯ್ನಾಡ ಅತಿಥಿಗಳಾದ ಆನಂದ‌ ಶೆಟ್ಟಿ ತಾಳಿಪಡ್ಪು, ರಾಜೇಶ್ ಹಾಗೂ ಕುಣಿತ‌ಭಜನಾ ತಂಡದ ತರಬೇತುದಾರರಾದ ಹರಿಣಿ ಉತ್ಕರ್ಷ್ ಶೆಟ್ಟಿ, ನಮಿತಾ ಸಾಲ್ಯಾನ್, ಯಕ್ಷಿತ್ ಶೆಟ್ಟಿ , ಜೀವಿತ್ ಪೂಂಜರವರನ್ನು ಸ್ವಾಮೀಜಿಯವರು ಶಾಲು ಹೊದಿಸಿ, ಸ್ಮರಣಿಕೆ ,ಮಂತ್ರಾಕ್ಷತೆಯೊಂದಿಗೆ ಅನುಗ್ರಹಿಸಿದರು.

ಇದೇ ವೇದಿಕೆಯಲ್ಲಿ ಕನ್ನಡ ಸಂಘದ ವತಿಯಿಂದ ಅಧ್ಯಕ್ಷ ಪ್ರದೀಪ್ ಶೆಟ್ಟಿಯವರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತಾಯ್ನಾಡಿನಿಂದ ಅಗಮಿಸಿದ ಪೂಜ್ಯ ಸ್ವಾಮೀಜಿ ಹಾಗೂ ಇತರರನ್ನು ಶಾಲು, ಸ್ಮರಣಿಕೆ ನೀಡಿ ಗೌರವಿಸಿದರು‌.
ಮಂಗಳಾರತಿ, ಪ್ರಸಾದ ವಿತರಣೆಯ ಬಳಿಕ ವಿಶೇಷ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು‌.

ದ್ವೀಪದ ಕಲಾಸಂಘಟಕ ಮೋಹನದಾಸ್ ರೈ ಎರುಂಬು ಅವರ ಸಾರಥ್ಯದ ಅಮ್ಮ ಕಲಾವಿದರು ಬಹರೈನ್ ವತಿಯಿಂದ ನಡೆದ ಈ ಕಾರ್ಯಕ್ರಮ ನೂರಾರು ಸ್ವಯಂಸೇವಕರ ಶ್ರಮ, ಬದ್ದತೆ, ಭಕ್ತಿಯಿಂದ ಅತ್ಯಂತ ಶಿಸ್ತುಬದ್ಧವಾಗಿ ಯಶಸ್ವಿಯಾಗಿ ಮೂಡಿಬಂದಿತು.

- Advertisement -

Related news

error: Content is protected !!