ಆಯೋಧ್ಯ ಶ್ರೀ ರಾಮ ಮಂದಿರ ಪ್ರತಿಮೆ ನಿರ್ಮಾಣಕ್ಕೆ ಕಾರ್ಕಳದಿಂದ ಕಲ್ಲು ರವಾನೆಯಾಗಿದೆ. ಕರಿಕಲ್ಲಿನ ಊರು ಎಂದೇ ಪ್ರಖ್ಯಾತ ಪಡೆದ ಕಾರ್ಕಳದಿಂದ ಕೃಷ್ಣಶಿಲೆಯನ್ನು ರವಾನಿಸಲಾಗಿದೆ. ವಿಶ್ವ ಹಿಂದೂ ಪರಿಷತ್, ಬಜರಂಗದಳದ ತಂಡದ ನೇತೃತ್ವದಲ್ಲಿ ತುಂಗಾ ಪೂಜಾರಿ ಜಾಗದಲ್ಲಿ ಇದ್ದ ಕಲ್ಲು ರವಾನೆಯಾಗಿದೆ. ರಾಮ ಮಂದಿರ ನಿರ್ಮಾಣಕ್ಕ ದೇಶದ ಮೂಲೆ ಮೂಲೆಯಿಂದ ಕಲ್ಲು ರವಾನೆಯಾಗುತ್ತಿದೆ. ಶಿಲ್ಪಿಗಳ ತಂಡ ಗುಣಮಟ್ಟವನ್ನು ಪರಿಶೀಲಿಸಿ ಪ್ರತಿಮೆ ಕೆತ್ತನೆ ನಿರ್ಮಾಣಕ್ಕೆ ಮುಂದಾಗಲಿದ್ದಾರೆ.
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಐತಿಹಾಸಿಕ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲಿರುವ ಭವ್ಯವಾದ ಶ್ರೀ ರಾಮ ಮೂರ್ತಿ ಕೆತ್ತನೆಗೆ ಆಯ್ಕೆಯಾಗಿದೆ ಕಾರ್ಕಳದ ಕೃಷ್ಣಶಿಲೆ. ಶಿಲ್ಪಕಲೆಗೆ ಹೆಸರಾಗಿರುವ ಶಿಲ್ಪಿಗಳ ತವರೂರು ಎಂದೇ ಖ್ಯಾತವಾಗಿರುವ ಕಾರ್ಕಳದ ಈದು ಗ್ರಾಮದ ತುಂಗ ಪೂಜಾರಿಯವರ ಭೂಮಿಯಲ್ಲಿದ್ದ ಕೃಷ್ಣಶಿಲೆ ಆಯ್ಕೆಯಾಗಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ದೇಶದ ವಿವಿಧ ಭಾಗಗಳಿಂದ ಆಯೋಧ್ಯಾ ಶ್ರೀ ರಾಮ ಮಂದಿರ ನಿರ್ಮಾಕ್ಕೆ ಕಲ್ಲನ್ನು ರವಾನಿಸಲಾಗುತ್ತಿದೆ.
9 ಟನ್ ತೂಕದ ಶಿಲೆ:
ಭೂಮಿಯೊಳಗಿದ್ದ ಶಿಲೆಯನ್ನು ಬಜಗೋಳಿ ಅಯ್ಯಪ್ಪ ಮಂದಿರಕ್ಕೆ ತಂದು ವಿಶ್ವ ಹಿಂದು ಪರಿಷತ್ ಮತ್ತು ಭಜರಂಗದಳದ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಶಿಲೆಯು 9 ಟನ್ ತೂಕ, 9.5 ಅಡಿ ಉದ್ದ, 6 ಅಡಿ ಅಗಲ ಮತ್ತು 4.5 ಅಡಿ ದಪ್ಪವಿದೆ. ಕಾರ್ಕಳದಿಂದ ಸುಮಾರು 2120 ಕಿ.ಮೀ. ದೂರದ ಅಯೋಧ್ಯೆಗೆ ಟ್ರಕ್ ಮೂಲಕ ಶಿಲೆಯನ್ನು ಕಳುಹಿಸಲಾಯಿತು.
ಈಗಾಗಲೇ ಮೈಸೂರು ಜಿಲ್ಲೆ ಹೆಗ್ಗಡೆದೇವನ ಕೋಟೆಯಿಂದ ಎರಡು ಶಿಲೆಗಳನ್ನು ಅಯೋಧ್ಯೆಗೆ ಕಳುಹಿಸಲಾಗಿದೆ. ನೇಪಾಳದ ಗಂಡಕೀ ನದಿಯಿಂದ ಎರಡು ಸಾಲಿಗ್ರಾಮ ಶಿಲೆಗಳು ಅಯೋಧ್ಯೆಗೆ ಬಂದಿವೆ. ರಾಜಸ್ಥಾನದಿಂದ ಮೂರು ಅಮೃತ ಶಿಲೆಗಳು ತಲುಪಿವೆ. ಇನ್ನೂ ಒಡಿಶಾ ಮತ್ತು ತಮಿಳುನಾಡಿನಿಂದ ಶಿಲೆಗಳು ಅಯೋಧ್ಯೆಗೆ ಬರಲಿವೆ. ಎಲ್ಲ ಶಿಲೆಗಳು ತಲುಪಿದ ನಂತರ ಪರಿಣಿತ ಶಿಲ್ಪಿಗಳು ಹಾಗೂ ತಜ್ಞರ ಸಮಿತಿ ಪರೀಕ್ಷೆ ನಡೆಸಿ ಶಿಲೆಯನ್ನು ಆಯ್ಕೆ ಮಾಡಲಿದೆ.
ತಿಂಗಳ ಹಿಂದೆ ವಿಶ್ವ ಹಿಂದು ಪರಿಷತ್ನ ಹಿರಿಯರು ಸಂಪರ್ಕಿಸಿ ಕಾರ್ಕಳದ ಕೃಷ್ಣ ಶಿಲೆಗಳ ಬಗ್ಗೆ ವಿಚಾರಿಸಿದ್ದರು. ಬಳಿಕ ಅಯೋಧ್ಯೆಯಿಂದ ಪರಿಣಿತರ ತಂಡ ಬಂದು ಪರಿಶೀಲಿಸಿತ್ತು. ಶಿಲೆಯನ್ನು ಗುರುತಿಸಿ, ಕಳುಹಿಸುವಂತೆ ಸೂಚಿಸಿತು. ರಾಮ ಜನ್ಮಭೂಮಿ ಮಂದಿರದಲ್ಲಿ ಪ್ರತಿಷ್ಠೆಯಾಗುವ ರಾಮನ ಬಿಂಬ ನಿರ್ಮಾಣಕ್ಕೆ ನಮ್ಮ ಕಾರ್ಕಳದ ಕಲ್ಲನ್ನೂ ಪರಿಗಣಿಸಿದ್ದು, ನಮಗೆ ಸಾರ್ಥಕತೆ ತಂದಿದೆ ಎಂದು ಭಜರಂಗದಳ ದಕ್ಷಿಣ ಪ್ರಾಂತ ಸಂಚಾಲಕ ಸುನೀಲ್ ಕೆ.ಆರ್. ಹೇಳಿದ್ದಾರೆ.