ಚಿಕ್ಕಮಗಳೂರು : ಚಿಕ್ಕಮಗಳೂರಿನ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ನರ್ಸ್ ಓರ್ವರ ನಿರ್ಲಕ್ಷ್ಯದಿಂದಾಗಿ 4 ತಿಂಗಳ ಮಗು ಮೃತಪಟ್ಟ ಆರೋಪ ಕೇಳಿ ಬಂದಿದೆ.
ಹಾಸನದ ಬೇಲೂರು ಸಮೀಪದ ಸೂರಾಪುರ ಗ್ರಾಮದ ಗೋಪಾಲ್ ಹಾಗೂ ಮೀನಾಕ್ಷಿ ದಂಪತಿಯ 4 ತಿಂಗಳ ಮಗು ಮಲ್ಲೇಗೌಡ ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದು, ವೈದ್ಯರು ಮತ್ತು ನರ್ಸ್ ನಿರ್ಲಕ್ಷ್ಯದಿಂದ ಮಗು ಮೃತಪಟ್ಟಿದೆ ಎಂದು ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು 4 ತಿಂಗಳ ಮಗುವಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ ಕೂಡಲೇ ಪೋಷಕರು ಮಗುವನ್ನು ಚಿಕ್ಕಮಗಳೂರು ನಗರದ ಹೆರಿಗೆ ಆಸ್ಪತ್ರೆಯ ಮಕ್ಕಳ ಘಟಕದ ವೈದ್ಯರಿಂದ ತಪಾಸಣೆಗೊಳಪಡಿಸಿದ್ದಾರೆ.
ವೈದ್ಯರ ಸಲಹೆಯಂತೆ ಮಗುವನ್ನು ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು, ಹಾಲು ಕುಡಿಸಬಾರದೆಂದು ವೈದ್ಯರು ಹೇಳಿದ್ದರು. ನಿನ್ನೆ ಸಂಜೆಯವರೆಗೂ ಆರೋಗ್ಯವಾಗಿದ್ದ ಮಗುವಿಗೆ ಸಂಜೆ ವೇಳೆ ಬಂದ ನರ್ಸ್ ಒಬ್ಬರು ಮಗುವಿಗೆ ಹಾಲು ಕುಡಿಸಲು ಮುಂದಾಗಿದ್ದಾರೆ. ಹಾಲು ಕುಡಿಸುತ್ತಿದ್ದಂತೆ ಮಗುವಿನ ಬಾಯಿ, ಮೂಗಿನಲ್ಲಿ ಹಾಲು ಹೊರ ಬಂದು ಮಗು ಮೃತಪಟ್ಟಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಇನ್ನು ಹೆಸರಿಡಿದ ಮಗುವಿನ ದುರಂತ ಸಾವಿನಿಂದ ಸಂಬಂಧಿಕರು ಆಕ್ರೋಶಭರಿತರಾಗಿ ವೈದ್ಯರು, ನರ್ಸ್ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದರು. ಮೃತ ಮಗುವಿನ ಕುಟುಂಬಸ್ಥರ ಆಕ್ರಂದನ ಮುಗಿಲುಮಟ್ಟಿತ್ತು. ವೈದ್ಯರ ಹಾಗೂ ನರ್ಸ್ ನಿರ್ಲಕ್ಷ್ಯದಿಂದಲೇ ಮಗು ಮೃತಪಟ್ಟಿದೆ ಎಂದು ಆರೋಪಿಸಿ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆ ಎದುರು ಪ್ರತಿಭಟಿಸಿದ ಪ್ರಸಂಗವೂ ನಡೆಯಿತು. ಬಳಿಕ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಹಿರಿಯ ವೈದ್ಯರ ಸೂಕ್ತ ಕ್ರಮದ ಭರವಸೆಯ ಮೇರೆಗೆ ಪ್ರತಿಭಟನೆ ಕೈಬಿಡಲಾಯಿತು.