ಉಡುಪಿ: ಇಲ್ಲಿನ ಗುಂಡಿಬೈಲ್ ಸಮೀಪದ ಬಾಬು ಆಚಾರ್ಯ ಎಂಬುವವರಿಗೆ ಸೇರಿದ ಹಳೆಯ ಮನೆಯ ಬೀಗ ಒಡೆದು ಒಳ ನುಗ್ಗಿದ ಕಳ್ಳರು 3.6 ಲಕ್ಷ ಮೌಲ್ಯದ 90 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದು, ಜೊತೆಗೆ ಪೂಜೆಯ ಕೊಠಡಿಯಲ್ಲಿದ್ದ ಕಾಣಿಕೆ ಹುಂಡಿಯಲ್ಲಿದ್ದ 10 ಸಾವಿರ ಹಾಗೂ 400 ರೂಪಾಯಿ ಮೌಲ್ಯದ ಬೆಳ್ಳಿಯ ವಸ್ತುಗಳು ಕಳ್ಳತನವಾಗಿವೆ.
ಈ ಬಗ್ಗೆ ತನಿಖೆ ಕೈಗೊಂಡ ನಗರ ಠಾಣೆಯ ಸಿಬ್ಬಂದಿ, ಕುಕ್ಕಿಕಟ್ಟೆ ನಿವಾಸಿ ಸುಕೇಶ್ ನಾಯ್ಕ್ (34) ಎಂಬಾತನನ್ನು ಬಂಧಿಸಿದ್ದಾರೆ.
ಬೆಳ್ಳಂಪಲ್ಲಿಯಲ್ಲಿ ಆತನನ್ನು ವಿಚಾರಣೆಗೆ ಒಳಪಡಿಸಿದಾಗ ತಾನು ಮಾಡಿದ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಗುಂಡಿಬೈಲ್ನ ಪಂಚಧೂಮಾವತಿ ದೇವಸ್ಥಾನದ ಬಳಿಯ ಶ್ರೀಕರ್ ಕಾಮತ್ ಎಂಬುವರಿಗೆ ಸೇರಿದ ಜಮೀನಿನಲ್ಲಿ ಮಣ್ಣಿನಡಿ ಬಚ್ಚಿಟ್ಟಿದ್ದ 3.6 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ಸುಕೇಶ್ ನಾಯ್ಕ್ ಈ ಹಿಂದೆ ಹಲವು ಕಳ್ಳತನ ಪ್ರಕರಣಗಳಲ್ಲಿ ಆರೋಪಿಯಾಗಿದ್ದ. ತಿಂಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಗೊಂಡಿದ್ದ ಎಂದು ತಿಳಿದುಬಂದಿದೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.