ಕಳ್ಳತನಕ್ಕೆಂದು ನುಗ್ಗುವ ಕಳ್ಳರು ಇದ್ದ ಸೊತ್ತುಗಳನ್ನು ಎಲ್ಲಾ ದೋಚಿ ಪರಾರಿಯಾಗುವುದು ಕೇಳಿದ್ದೇವೆ, ಆದರೆ ಇಲ್ಲೊಬ್ಬ ವಿಚಿತ್ರ ಕಳ್ಳ ಸ್ವಲ್ಪ ದುಡ್ಡು ಉಳಿಸಿ ಹೋದ ಘಟನೆ ನಡೆದಿದೆ. ಭದ್ರವಾಗಿ ಇರಿಸಿದ್ದ 10 ಲಕ್ಷದ ಮೂವತ್ತು ಸಾವಿರ ರೂ. ನಗದಿನ ಪೈಕಿ 8ಲಕ್ಷದ 90 ಸಾವಿರ ಎಗರಿಸಿ ಉಳಿದ ಹಣವನ್ನು ಕಳ್ಳ ಅಲ್ಲೇ ಬಿಟ್ಟು ಹೋಗಿದ್ದಾನೆ.
ಉಡುಪಿ ಜಿಲ್ಲೆಯ ಮಲ್ಪೆಯ ಕೊಳ ಎಂಬಲ್ಲಿ ಈ ಘಟನೆ ನಡೆದಿದ್ದು, ಮಲ್ಪೆ ಬಂದರಿನ ರೈಟರ್ ಆಗಿ ಕೆಲಸ ಮಾಡಿದ್ದ ಗದಗದ ಕಳಸಾಪುರ ಗ್ರಾಮದ ಸುರೇಶ ಲಮಾಣಿ ಅವರು ಈ ಕಳ್ಳತನದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಸುರೇಶ ಲಮಾಣಿ ಎಂಬವರು ತಮ್ಮ ರೂಮಿನಲ್ಲಿ ಬಾಕ್ಸಿನ ಒಳಗೆ 10,30,000 ರೂ ಇಟ್ಟು ಬೀಗ ಹಾಕಿ ಮರುದಿನ ಬೆಳಿಗ್ಗೆ 4:30 ರ ಸುಮಾರಿಗೆ ಮೀನುಗಾರಿಕೆಗಾಗಿ ಮಲ್ಪೆ ಬಂದರಿಗೆ ಹೋಗಿದ್ದರು. ಬಳಿಕ ಅವರು ಮೀನುಗಾರಿಕೆ ಕೆಲಸ ಮುಗಿಸಿ ವಾಪಾಸು ಬೆಳಿಗ್ಗೆ 9:30 ರ ವೇಳೆಗೆ ರೂಮಿನ ಬಳಿ ಬಂದು ನೋಡುವಾಗ ಕಳ್ಳತನ ನಡೆದಿರುವುದು ತಿಳಿದು ಬಂದಿದೆ.
ಮೇ.೯ ರ ಬೆಳಿಗ್ಗೆ ಸುರೇಶ ಅವರ ರೂಮಿನ ಬೀಗ ಮುರಿದು ಒಳಗೆ ನುಗ್ಗಿದ ಕಳ್ಳ ಬಾಕ್ಸ್ ನಲ್ಲಿ ಇಟ್ಟಿದ್ದ 10,30,000 ರೂ. ಪೈಕಿ 8,90,000 ರೂ. ವನ್ನು ಕಳವು ಮಾಡಿ ಉಳಿದ ಹಣವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ ಎಂಬುದಾಗಿ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.