ಉಪ್ಪಿನಂಗಡಿ: ಹಿಜಾಬ್ ವಿವಾದದ ಮಧ್ಯೆಯೇ ರಾಜ್ಯಾದ್ಯಂತ ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಗಳು ಆರಂಭವಾಗಿದೆ. ಈ ನಡುವೆ ಉಪ್ಪಿನಂಗಡಿ ಪದವಿ ಕಾಲೇಜಿನಲ್ಲಿ ಹಿಜಾಬ್ ವಿವಾದ ಸುಖಾಂತ್ಯಗೊಳ್ಳುವ ಲಕ್ಷಣ ಕಂಡು ಬಂದಿದೆ. ಹೈಕೋರ್ಟ್ ಆದೇಶ, ರಾಜ್ಯ ಸರಕಾರದ ನಿಯಮಗಳನ್ನು ಉಲ್ಲಂಘಿಸಿ ಹಿಜಾಬ್ ಧರಿಸಿ ಬಂದು ಸಸ್ಪೆಂಡ್ ಆಗಿದ್ದ ವಿದ್ಯಾರ್ಥಿಗಳು ಎಚ್ಚೆತ್ತುಕೊಂಡಿದ್ದಾರೆ.
ಉಪ್ಪಿನಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ 24 ವಿದ್ಯಾರ್ಥಿನಿಯರನ್ನು ಅಮಾನತುಗೊಳಿಸಿದ ಬಳಿಕ ಉಳಿದ ವಿದ್ಯಾರ್ಥಿನಿಯರು ಎಚ್ಚೆತ್ತುಕೊಂಡಿದ್ದಾರೆ. ನಿನ್ನೆ 46 ವಿದ್ಯಾರ್ಥಿನಿಯರು ಹಿಜಾಬ್ ಬೇಡಿಕೆ ಬದಿಗಿಟ್ಟು ತರಗತಿಗೆ ಹಾಜರಾಗಿದ್ದಾರೆ.
ಜೂನ್ 6 ರ ಸೋಮವಾರದಂದು ಕಾಲೇಜು ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಲಾಗಿತ್ತು. ಆದರೆ ಅಮಾನತಾಗಿರುವ ವಿದ್ಯಾರ್ಥಿನಿಯರ ಪೈಕಿ ಹಲವರು ಮರುದಿನ ಕಾಲೇಜಿಗೆ ಬಂದು ತರಗತಿಗೆ ಪ್ರವೇಶಿಸಲು ಯತ್ನಿಸಿದ್ದಾರೆ. ಈ ಘಟನೆಯ ಬೆನ್ನಲ್ಲೇ ಎಲ್ಲ ವಿದ್ಯಾರ್ಥಿನಿಯರ ಹೆತ್ತವರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಲಾಗಿದೆ. ಬಹುತೇಕ ಹೆತ್ತವರು ತಮ್ಮ ಮಕ್ಕಳು ಹಿಜಾಬ್ ಹೋರಾಟದಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿಯೇ ಇಲ್ಲವೆಂದು ತಿಳಿಸಿದ್ದರು.
ತಪ್ಪಿಗೆ ಕ್ಷಮೆಯಾಚನೆ; ಅಮಾನತಾಗಿದ್ದ 6 ಮಂದಿ ತರಗತಿಗೆ ಹಾಜರು
ಒಂದು ವಾರದ ಮೊದಲು ಅಮಾನತಾಗಿದ್ದ ಎಲ್ಲ 6 ವಿದ್ಯಾರ್ಥಿನಿಯರು ಬುಧವಾರ ಕಾಲೇಜಿಗೆ ಆಗಮಿಸಿ ಸಮವಸ್ತ್ರ ನಿಯಮಾವಳಿಯನ್ನು ಪಾಲಿಸುವುದಾಗಿ ತಪ್ಪೊಪ್ಪಿಗೆ ಹೇಳಿಕೆ ನೀಡಿ ತರಗತಿಗೆ ಹಾಜರಾಗಿದ್ದಾರೆ. ಬುಧವಾರ ಹಿಜಾಬ್ ಪ್ರತಿಭಟನೆಯಿಂದ ದೂರ ಸರಿದು ಮೊದಲ ಅವಧಿಯಲ್ಲಿ 35 ವಿದ್ಯಾರ್ಥಿನಿಯರು ತರಗತಿಗೆ ಹಾಜರಾಗಿದ್ದರೆ, ಸಹಜ ಸ್ಥಿತಿಯ ಮಾಹಿತಿ ಪಡೆದು ಹಿಜಾಬ್ ಪ್ರತಿಭಟನೆಗಳು ಪ್ರಾರಂಭವಾದ ದಿನದಿಂದ ವಿವಾದದಿಂದ ದೂರವಾಗಿ ಅಂತರ ಕಾಯ್ದುಕೊಂಡ 11 ಮಂದಿ ವಿದ್ಯಾರ್ಥಿನಿಯರು ಬಳಿಕದ ಅವಧಿಯ ತರಗತಿಗೆ ಹಾಜರಾಗಿದ್ದಾರೆ.
ಇದರಿಂದಾಗಿ ಒಟ್ಟು 101 ಮುಸ್ಲಿಮ್ ವಿದ್ಯಾರ್ಥಿನಿಯರನ್ನು ಹೊಂದಿರುವ ಕಾಲೇಜಿನಲ್ಲಿ ಬುಧವಾರ ಸಮವಸ್ತ್ರ ನಿಯಮ ಪಾಲನೆಯೊಂದಿಗೆ ತರಗತಿ ಪ್ರವೇಶಿಸಿದ ವಿದ್ಯಾರ್ಥಿನಿಯರ ಸಂಖ್ಯೆ 46 ಆಗಿದೆ. ವಿವಾದದಿಂದ ಅಂತರ ಕಾಯ್ದುಕೊಂಡು ಗೈರು ಹಾಜರಾಗುತ್ತಿರುವ ಉಳಿದ ವಿದ್ಯಾರ್ಥಿನಿಯರು ಇಂದಿನಿಂದ ಕಾಲೇಜಿಗೆ ಆಗಮಿಸುವ ಭರವಸೆಯನ್ನು ಉಪನ್ಯಾಸಕರು ವ್ಯಕ್ತಪಡಿಸಿದ್ದಾರೆ.