ಉಳ್ಳಾಲ: ದರ್ಗಾಕ್ಕೆ ಬಂದಿದ್ದ ವ್ಯಕ್ತಿಯೋರ್ವರು ಸಮುದ್ರದಲ್ಲಿ ಮಕ್ಕಳೊಂದಿಗೆ ನೀರಿನಲ್ಲಿ ಆಟವಾಡುತ್ತಿದ್ದ ವೇಳೆ ನೀರು ಪಾಲಾಗಿದ್ದು , ಆತನ ಮಗನನ್ನ ಸ್ಥಳೀಯ ಈಜುಗಾರರು ರಕ್ಷಿಸಿದ್ದಾರೆ. ಮಳಲಿ ನಿವಾಸಿ ಖಾಲಿದ್(51) ಸಮುದ್ರ ಪಾಲಾದ ವ್ಯಕ್ತಿ.
ಖಾಲಿದ್ ಅವರು ಹಬ್ಬದ ನಿಮಿತ್ತ ತನ್ನ ಪತ್ನಿ , ಮಗ ಹಾಗೂ ಸಂಬಂಧಿಕರ ಮಕ್ಕಳ ಜೊತೆ ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಿದ್ದರು. ಬಳಿಕ ಉಳ್ಳಾಲ ಬೀಚ್ ಗೆ ತೆರಳಿದ್ದರು.ಈ ವೇಳೆ ಖಾಲಿದ್ ಮಗನೊಂದಿಗೆ ನೀರಾಟವಾಡುತ್ತಿದ್ದ ವೇಳೆ ಅಬ್ಬರದ ಅಲೆಯು ಎಳೆದೊಯ್ದಿದೆ. ತಕ್ಷಣ ಸ್ಥಳದಲ್ಲಿದ್ದ ಈಜುಗಾರರು ಖಾಲಿದ್ ಅವರ ಮಗನನ್ನು ರಕ್ಷಿಸಿ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಂಜೆ ವೇಳೆ ಖಾಲಿದ್ ಅವರ ಮೃತದೇಹ ಸಮುದ್ರ ತೀರದಲ್ಲಿ ಸಿಕ್ಕಿದ್ದು ಉಳ್ಳಾ ಲ ಠಾಣಾ ಪೊಲೀಸರು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಖಾಲಿದ್ ಮುಳುಗುತ್ತಿದ್ದಂತೆ ಕುಟುಂಬಸ್ಥರು ರಕ್ಷಣೆಗಾಗಿ ಬೊಬ್ಬಿರಿದಿದ್ದು, ಈ ವೇಳೆ ಸಮೀಪದಲ್ಲೇ ಇದ್ದ ಕೋಡಿ ನಿವಾಸಿಗಳಾದ ಜಬ್ಬಾರ್, ಅಶ್ರಫ್, ಇಮ್ತಿಯಾಝ್, ಮಹಮ್ಮ ದ್ ಎಂಬವರು ಧಾವಿಸಿ ಖಾಲಿದ್ ಅವರ ಪುತ್ರ ನನ್ನು ರಕ್ಷಿಸುವಲ್ಲಿ ಯಶಸ್ವಿಯಾದರು. ಆದರೆ ಖಾಲಿದ್ ಅವರನ್ನು ಸಮುದ್ರ ದೂರಕ್ಕೆ ಎಳೆದಿದ್ದು, ಹಲವು ಗಂಟೆಗಳ ಕಾರ್ಯಾಚರಣೆ ನಂತರ ಮೃತದೇಹ ಪತ್ತೆಹಚ್ಚಿದ್ದಾರೆ.
ಸಮುದ್ರಕ್ಕೆ ಹಾರುವ ಸಂದರ್ಭ ಜಬ್ಬಾರ್ ಅವರು ಪರಿಚಿತರ ಕೈಯಲ್ಲಿ ತಮ್ಮ ಪಸ್೯, ವಾಚ್ ಎಲ್ಲವನ್ನೂ ನೀಡಿದ್ದರು. ಅವರಂತೆ ಇತರರೂ ನೀಡಿದಾಗ ಯುವಕನ ಕೈಯಲ್ಲಿ ವಸ್ತುಗಳು ತುಂಬಿ ಜಬ್ಬಾರ್ ಅವರ ಪಸ್೯ ಕೆಳಗೆ ಬಿದ್ದಿರುವ ಸಾಧ್ಯ ತೆಗಳಿವೆ. ಕಳೆದುಹೋದ ಪಸ್೯ನಲ್ಲಿ ದಾಖಲೆಗಳು, ರೂ. 8,000 ನಗದು ಇದ್ದು ಸಿಕ್ಕಿ ದವರು ವಾಪಸ್ಸು ಹಿಂತಿರುಗಿಸುವಂತೆ ಸಾಮಾಜಿಕ ತಾಣಗಳ ಮೂಲಕ ಮನವಿ ಮಾಡಿದ್ದಾರೆ.