

ಉಳ್ಳಾಲ: ಯುವತಿಯ ವಿಚಾರವಾಗಿ ತಂಡವೊಂದು ಯುವಕನಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ಉಳ್ಳಾಲ ಸಮೀಪದ ಮುಕ್ಕಚೇರಿ ಬಳಿಯ ಮಸೀದಿ ಪಕ್ಕ ನಡೆದಿದೆ. ಕೋಡಿ ನಿವಾಸಿ ಮೊಯೀನ್ ಎಂಬವರ ಪುತ್ರ ಅಲ್ ಸದೀನ್ (24) ಚೂರಿ ಇರಿತಕ್ಕೆ ಒಳಗಾದ ಯುವಕ.

ಅಲ್ ಸದೀನ್ ಮಸೀದಿ ಸಮೀಪ ನಿಂತಿದ್ದ ಸಂದರ್ಭ ತಂಡವೊಂದು ಆಗಮಿಸಿ ಯುವತಿ ವಿಚಾರವಾಗಿ ಕ್ಯಾತೆ ತೆಗೆದು ಚೂರಿಯಿಂದ ದಾಳಿ ಮಾಡಿದೆ ಎನ್ನಲಾಗಿದೆ. ಯುವಕನ ಬೆನ್ನಿನ ಮೇಲೆ ಚೂರಿ ಇರಿತದ ಗಾಯಗಳು ಕಂಡು ಬಂದಿದೆ. ಮೂಲಗಳ ಪ್ರಕಾರ ಹಲ್ಲೆಗೆ ಒಳಗಾದವ ಹಾಗೂ ಹಲ್ಲೆ ನಡೆಸಿದವರು ಪರಸ್ಪರ ಸ್ನೇಹಿತರು. ಇವರು ನಾಲ್ಕು ಜನ ಮಸೀದಿಯ ಸಮೀಪ ಮಾತನಾಡುತ್ತಿದ್ದ ವೇಳೆ ಯುವತಿಯ ವಿಚಾರ ಬಂದಿದ್ದು ಇದು ಗಲಾಟೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಯುವತಿಯ ವಿಚಾರವಾಗಿ ಅವರ ನಡುವೆ ವಾಗ್ವಾದ ನಡೆದು, ಅವರ ಪೈಕಿ ಓರ್ವ ಆರೋಪಿ ತನ್ನ ಬಳಿಯಿದ ಚೂರಿಯಿಂದ ಅಲ್ ಸದೀನ್ ಗೆ ಇರಿದಿದ್ದಾರೆ ಎನ್ನಲಾಗಿದೆ. ಗಾಯಾಳುವನ್ನು ದೇರಳಕಟ್ಟೆ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಿಸಿ ನೀಡಲಾಗುತ್ತಿದೆ. ಅಲ್ಲಿಗೆ ಪೊಲೀಸ್ ಕಮೀಷನರ್ ಶಶಿ ಕುಮಾರ್, ಎಸಿಪಿ ದಿನಕರ್ ಶೆಟ್ಟಿ, ಉಳ್ಳಾಲ ಠಾಣಾಧಿಕಾರಿ ಸಂದೀಪ್ ನೇತೃತ್ವದ ತಂಡ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.
ಚೂರಿ ಇರಿತಕ್ಕೆ ಒಳಗಾದ ಯುವಕ ನೀಡಿದ ಮಾಹಿತಿಯನ್ನು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆಂದು ಮೂಲಗಳು ತಿಳಿಸಿವೆ. ದಾಳಿಗೊಳಗಾದವನ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣಗಳಿವೆ. ಕೆಲ ತಿಂಗಳುಗಳ ಹಿಂದೆ ಉಳ್ಳಾಲ ಠಾಣಾ ಪೊಲೀಸ್ ವಾಹನಕ್ಕೆ ಬಾಟಲಿಯಿಂದ ದಾಳಿ ನಡೆಸಿರುವ ಪ್ರಕರಣವೂ ಇರುವುದಾಗಿ ತಿಳಿದು ಬಂದಿದೆ.

