

ಕಾರ್ಕಳ: ಪ್ರೀತಿಸಿ ಮದುವೆಯಾದ ಗಂಡನೇ ವರದಕ್ಷಿಣೆ ಕಿರುಕುಳ ನೀಡಿರುವ ಘಟನೆ ನಡೆದಿದೆ. ಬೈಲೂರು ನಿವಾಸಿ ಸೌಮ್ಯ ದೂರು ನೀಡಿದವರು.
ನಾಲ್ಕೂವರೆ ವರ್ಷದ ಹಿಂದೆ ಪೇಸ್ಬುಕ್ನಲ್ಲಿ ಕಾಸರಗೋಡು ನಿವಾಸಿ ಸುನೀಲ್ ಟಿ ಎಂಬಾತನ ಸ್ನೇಹವಾಗಿದ್ದು, ನಂತರದ ದಿನಗಳಲ್ಲಿ ಸ್ನೇಹ ಪ್ರೀತಿಗೆ ತಿರುಗಿ 2019 ರ ಮೇ 12 ರಂದು ಕಾರ್ಕಳ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದರು.
ಒಂದು ವರ್ಷದವರೆಗೆ ದಾಂಪತ್ಯ ಜೀವನ ಚೆನ್ನಾಗಿಯೇ ಇದ್ದು, ನಂತರದ ದಿನಗಳಲ್ಲಿ ವರದಕ್ಷಿಣೆಗಾಗಿ ಪತ್ನಿಯನ್ನು ಪೀಡಿಸಲು ಆರಂಭಿಸಿದ. ಹಣಕ್ಕಾಗಿ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿ 5ಲಕ್ಷ ರೂ ವರದಕ್ಷಿಣೆ ನೀಡಬೇಕು ಎಂದು ಹಿಂಸಿಸಿದ್ದಾನೆ. ಈ ವೇಳೆ ಸೌಮ್ಯ ಅವರು ಚಿನ್ನಾಭರಣವನ್ನು ಅಡವಿಟ್ಟು 80,000 ರೂ. ಹಣವನ್ನು ನೀಡಿದ್ದಾರೆ.
ಕಿರುಕುಳದಿಂದ ಬೇಸತ್ತ ಸೌಮ್ಯ ತಾಯಿ ಮನೆಯಲ್ಲಿದ್ದ ವೇಳೆ ಸುನಿಲ್ ತನ್ನ ಮನೆಗೆ ಕರೆದುಕೊಂಡು ಹೋಗಿಲ್ಲ.ಇದರಿಂದ ನೊಂದು ಸೌಮ್ಯ ಅವರು ಆತ್ಮಹತ್ಯೆಗೂ ಯತ್ನಿಸಿದ್ದರು.
ಬಳಿಕ ಇತ್ತೀಚಿಗೆ ಜೂ.20 ರಂದು ಕಾರ್ಕಳ ನಗರ ಠಾಣೆಗೆ ದೂರು ನೀಡಿದ ಮೇರೆಗೆ ಸುನೀಲ್ ಪತ್ನಿಯನ್ನು ಉತ್ತಮವಾಗಿ ನೋಡಿಕೊಳ್ಳುವುದಾಗಿ ತಿಳಿಸಿದ್ದ ಆದರೆ ಬಳಿಕ ಫೋನ್ ಮಾಡಿದಾಗ ಇನ್ನೂ 5 ಲಕ್ಷ ರೂ ವರದಕ್ಷಿಣೆ ಕೊಡುವಂತೆ ಜೀವ ಬೆದರಿಕೆ ಹಾಕಿ ಮಾನಸಿಕ ಹಿಂಸೆ ನೀಡಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

