ಕಾಸರಗೋಡು : ಕಾಸರಗೋಡಿನ ಕಿಯೂರಿನಲ್ಲಿ ಭಾನುವಾರ ಬೆಳಗ್ಗೆ ದೋಣಿಯೊಂದು ಮಗುಚಿ ಮೂವರು ನಾಪತ್ತೆಯಾದ ಘಟನೆ ನಡೆದಿತ್ತು. ದೋಣಿ ದುರಂತದಲ್ಲಿ ಸಮುದ್ರ ಪಾಲಾಗಿದ್ದ ಮೂವರ ಮೃತದೇಹ ಪತ್ತೆಯಾಗಿದೆ.

ಮೃತರನ್ನು ಕಸಬಾ ತೀರದ ಸಂದೀಪ್ (34), ರತೀಶ್ (35) ಮತ್ತು ಕಾರ್ತಿಕ್ (22) ಎಂದು ಗುರುತಿಸಲಾಗಿದೆ. ಅವರ ಮೃತದೇಹ ಇಂದು ಬೆಳಗ್ಗೆ ಬೇಕಲ ಕೋಟಿಕುಳಂ ತೀರದಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಸಬಾ ತೀರದಿಂದ ಆಂಜನೇಯ ಎಂಬ ಫೈಬರ್ ದೋಣಿಯಲ್ಲಿ ಏಳು ಮಂದಿ ಮೀನುಗಾರಿಕೆಗೆ ತೆರಳಿದ್ದು, ಕಿಯೂರು ಸಮೀಪ ಅಲೆಗಳ ಅಬ್ಬರಕ್ಕೆ ದೋಣಿ ಮಗುಚಿ ಬಿದ್ದು ಈ ಘಟನೆ ನಡೆದಿತ್ತು ಎಂದು ದೂರಲಾಗಿದೆ. ನಾಲ್ವರನ್ನು ಇನ್ನೊಂದು ದೋಣಿಯಲ್ಲಿದ್ದ ಹಾಗೂ ಸ್ಥಳೀಯ ಮೀನುಗಾರರು ರಕ್ಷಿಸಿದ್ದರು. ಅಡ್ಕತ್ತಬೈಲ್ ಬೀಚ್ ನ ಬಿ.ಮನಿಕುಟ್ಟನ್ (36), ಕೋಟಿಕುಳಂ ಕಡಪ್ಪುರದ ರವಿ (22), ನೆಲ್ಲಿಕುಂಜೆಯ ಶಶಿ(35) ಮತ್ತು ಕಸಬಾದ ಶಿಬಿನ್ (23) ಅಪಾಯದಿಂದ ಪಾರಾಗಿದ್ದರು.


ದುರಂತ ಬಳಿಕ ಸ್ಥಳೀಯ ಮೀನುಗಾರರು, ಕರಾವಳಿ ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಚರಣೆ ನಡೆಸಿದ್ದು, ರಾತ್ರಿ ತನಕ ಶೋಧ ಮುಂದುವರಿದಿತ್ತು. ಸ್ಥಳಕ್ಕೆ ಆಗಮಿಸಿದ ಬೇಕಲ ಹಾಗೂ ಕರಾವಳಿ ಪೊಲೀಸರು ಮಹಜರು ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿಸಿದ್ದಾರೆ.

