ಕುಂದಾಪುರ: ನಾಯಿ, ಜಾನುವಾರು ಸೇರಿದಂತೆ ಸಾಕುಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿದ್ದ ಚಿರತೆಯು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ತೆಕ್ಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಲಾಡಿ ಎಂಬಲ್ಲಿನ ಶ್ರೀ ನಂದಿಕೇಶ್ವರ ದೇವಸ್ಥಾನ ಹಾಗೂ ಅಂಗನವಾಡಿ, ಶಾಲೆ ಪಕ್ಕದ ತೋಪಿನಲ್ಲಿ ಅರಣ್ಯ ಇಲಾಖೆಯಿಟ್ಟ ಬೋನಿನಲ್ಲಿ ಸೆರೆಯಾಗಿದೆ.
ತೆಕ್ಕಟ್ಟೆ ಸಮೀಪದ ಮಾಲಾಡಿಯ ತೋಪಿನ ಸುರೇಶ್ ದೇವಾಡಿಗರ ನಿವಾಸದಲ್ಲಿ ತಿಂಗಳುಗಳ ಹಿಂದೆ ಪುತ್ಯಕ್ಷವಾದ ಚಿರತೆ ಅವರ ಮನೆ ಸಾಕು ನಾಯಿಯನ್ನು ಹೊತ್ತೊಯಿತ್ತು. ಈ ಬಗ್ಗೆ ಮನೆಯವರಾದ ಸತೀಶ್ ದೇವಾಡಿಗ ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದು ನಿರಂತರ ಈ ಭಾಗದಲ್ಲಿ ಚಿರತೆ ಕಾಟವಿದ್ದರಿಂದ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದು, ಈ ಭಾಗದಲ್ಲಿ ಕಳೆದ ಮೂರ್ನಾಲ್ಕು ವರ್ಷದಿಂದ ಚಿರತೆಯ ಕಾಟವಿದ್ದು ಜನರು ಆತಂಕಕ್ಕೀಡಾಗಿದ್ದರು. ಇಲಾಖೆ ಬೋನ್ ಇಟ್ಟು ಚಿರತೆ ಹಿಡಿಯುವ ಕಾರ್ಯಾಚರಣೆ ನಡೆಸಲು ಮುಂದಾಗಿತ್ತು. ತಿಂಗಳುಗಳಿಂದ ಚಿರತೆ ಪ್ರತ್ಯಕ್ಷವಾದ ತೋಪಿನಲ್ಲಿ ಬೋನು ಇಡಲಾಗಿದ್ದು ಅಂದಾಜು 4-5 ವರ್ಷ ಪ್ರಾಯದ ಹಣ್ಣು ಚಿರತೆ ಸೆರೆಯಾಗಿದೆ.