ಕುಂದಾಪುರ : ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕಠಿಣ ಶಿಕ್ಷೆ ನೀಡುತ್ತಿದ್ದ ಹಾಗೂ ಹೇಳಿದ ಕೆಲಸ ಮಾಡದ ವಿದ್ಯಾರ್ಥಿಗಳಿಗೆ ಬೂಟು ಕಾಲಿನಿಂದ ತುಳಿಯುತ್ತಿರುವ ಆರೋಪದ ಮೇಲೆ ದೈಹಿಕ ಶಿಕ್ಷಣದ ಶಿಕ್ಷಕನೋರ್ವನನ್ನು ವಿದ್ಯಾರ್ಥಿಗಳ ಪೋಷಕರು ತರಾಟೆಗೆ ತೆಗೆದುಕೊಂಡಿರುವ ಘಟನೆ ಕುಂದಾಪುರ ತಾಲೂಕಿನ ಮೂಡ್ಲಕಟ್ಟೆ ಎಂಬಲ್ಲಿ ನಡೆದಿದೆ.
ಕುಂದಾಪುರ ತಾಲೂಕಿನ ಮೂಡ್ಲಕಟ್ಟೆ ಶಾಲೆಯ ದೈಹಿಕ ಶಿಕ್ಷಕ ದಯಾನಂದ ಬನ್ನೂರು ಅವರು ಕೆಲವು ತಿಂಗಳುಗಳಿಂದ ವಿದ್ಯಾರ್ಥಿಗಳಿಗೆ ಕಠಿಣ ಶಿಕ್ಷೆಗಳನ್ನು ನೀಡುತ್ತಿದ್ದು, ಹೇಳಿದ ಕೆಲಸ ಮಾಡದವರಿಗೆ ಬೂಟುಗಾಲಿನಲ್ಲಿ ತುಳಿಯುತ್ತಿದ್ದರು ಎನ್ನುವ ಆರೋಪ ಕೇಳಿಬಂದಿದೆ. ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರ ಈ ಕೃತ್ಯವನ್ನು ಪೋಷಕರಿಗೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಲೆಗೆ ಬಂದ ಪೋಷಕರು ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮಾತ್ರವಲ್ಲದೆ, ಈ ವಾಗ್ವಾದದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಸದ್ಯ ಪೋಷಕರು ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಶಿಕ್ಷಕರ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.