ಕುಡಿತದ ದಾಸನಾಗಿದ್ದ ಅಳಿಯನಿಗೆ, ಕುಡಿತ ಬಿಡು ಅಂತ ಸೋದರಮಾವ ಬುದ್ದಿ ಹೇಳಿದ್ದರು ಅಷ್ಟೇ, ಅಳಿಯ ಸಿಟ್ಟಾಗಿ ಮನೆ ಬಿಟ್ಟು ಹೋಗಿದ್ದನು. ಕೊನೆಗೆ 24 ವರ್ಷಗಳ ಬಳಿಕ ಆತ ಮನೆಗೆ ವಾಪಸ್ ಆಗಿದ್ದಾನೆ.
ಮನೆ ಬಿಟ್ಟು ಹೋದ ವ್ಯಕ್ತಿಯ ಹೆಸರು ಗಂಗಾಧರ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಚಿಕ್ಕಖೇಡ ಗ್ರಾಮದ ನಿವಾಸಿಯಾಗಿದ್ದಾನೆ. ಗಂಗಾಧರ ಕಳೆದ 24 ವರ್ಷಗಳ ಹಿಂದೆ ಅವರ ಮಾವ ಸಿದ್ದಪ್ಪ ಮದ್ಯ ಸೇವನೆ ಮಾಡಬೇಡ ಅದರಿಂದ ದೂರ ಇರು ಎಂದು ಬೈದು ಬುದ್ದಿ ಹೇಳಿದ್ದರು. ಮಾವ ಬೈದಿರುವ ಕಾರಣಕ್ಕೆ ಗ್ರಾಮವನ್ನೆ ಬಿಟ್ಟು ಹೋಗಿದ್ದನು. ಹೀಗೆ ಮನೆ ಬಿಟ್ಟು ಹೋದವನು, ಮಂಗಳೂರು ತಲುಪಿದ್ದನು. ಮಂಗಳೂರಿನ ಹಂದಿ ಸಾಕಾಣಿಕೆ ಕೇಂದ್ರದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ.
ಈ ಕಡೆ ಇವರ ಮನೆಯವರು ಗಂಗಾಧರನಿಗಾಗಿ ಸಾಕಷ್ಟು ಹುಡುಕಾಟ ನಡೆಸಿದ್ದರು. ಪೊಲೀಸ್ ಠಾಣೆಯಲ್ಲಿ ದೂರು ಸಹ ನೀಡಿದ್ದರು. ಯಾವುದೇ ಪ್ರಯೋಜನವಾಗಿರಲಿಲ್ಲ. ಹುಡುಕಾಟ ನಡೆಸಿ, ಬೇಸತ್ತ ಕುಟುಂಬಸ್ಥರು ಗಂಗಾಧರ ಮೃತ ಪಟ್ಟಿರಬಹುದು ಎಂದು ಕೈಚೆಲ್ಲಿ ಕುಳಿತುಕೊಂಡಿದ್ದರು. ಊರು ಬಿಟ್ಟು ಮಂಗಳೂರು ತಲುಪಿದ್ದ ಗಂಗಾಧರ ಹಂದಿ ಸಾಕಣೆ ಕೇಂದ್ರದಲ್ಲಿ ಕೂಲಿ ಕೆಲಸ ಮಾಡುತ್ತ ಜೀವನ ಸಾಗಿಸುತ್ತಿದ್ದರು. ಕೇಂದ್ರದ ಮಾಲೀಕ ಪ್ರವೀಣ ಅವರ ವಿಶ್ವಾಸ ಗಳಿಸಿ, ತನ್ನ ಕುಟುಂಬವನ್ನೇ ಮರೆತು ಸ್ವಾವಲಂಬಿಯಾಗಿ ಬದುಕುತ್ತಿದ್ದರು.
ಮಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಈತನಿಗೆ ಬ್ಯಾಂಕ್ ಖಾತೆ ತೆರೆಯುವ ಅವಶ್ಯಕತೆ ಉಂಟಾಗಿದೆ. ಹೀಗಾಗಿ ಬ್ಯಾಂಕ್ನಲ್ಲಿ ಖಾತೆ ತೆರೆಯಲು ಹೋದಾಗ ಸಿಬ್ಬಂದಿ ಆಧಾರ್ ಕಾರ್ಡ್ ಕೇಳಿದ್ದಾರೆ. ಆದರೆ ಈತನ ಬಳಿ ಯಾವುದೇ ದಾಖಲೆ, ಆಧಾರ್ ಕಾರ್ಡ್ ಇರಲಿಲ್ಲ. ಹೀಗಾಗಿ ಆಧಾರ್ ಕಾರ್ಡ್ ಮಾಡಿಸಲು ಮರಳಿ ತನ್ನ ಸ್ವಗ್ರಾಮ ಚಿಕ್ಕಖೇಡಕ್ಕೆ ಆಗಮಿಸಿದ್ದಾನೆ.
ಹೀಗೆ ಊರಿಗೆ ಬಂದ ಗಂಗಾಧರ ತನ್ನ ಮನೆ ಎಲ್ಲಿದೆಯಂತ ಹುಡುಕಾಟ ನಡೆಸಿದ್ದಾನೆ. ಆದರೆ ಆತನಿಗೆ ಮನೆ ದೊರೆತಿಲ್ಲ. ಇದರಿಂದ ಬೇಸತ್ತು ಪುನಃ ಮಂಗಳೂರಿಗೆ ಹೋಗಿದ್ದಾನೆ. ಮತ್ತೆ ಅನಿವಾರ್ಯ ಪರಿಸ್ಥಿತಿಯಿಂದಾಗಿ ವಾಪಾಸ್ ಚಿಕ್ಕಖೇಡ ಗ್ರಾಮಕ್ಕೆ ಆಗಮಿಸಿ, ಮನೆಯನ್ನು ಹುಡುಕಾಟ ನಡೆಸಿದ್ದಾನೆ. ಗ್ರಾಮಸ್ಥರು ಮನೆಯನ್ನು ತೋರಿಸಿದ್ದಾರೆ.
ಗಂಗಾಧರನಿಗೆ ಹೆಂಡತಿ ಸೇರಿದಂತೆ ಇಬ್ಬರು ಗಂಡು ಮಕ್ಕಳು ಇದ್ದಾರೆ. ಮಕ್ಕಳು 2 ವರ್ಷ ಇದ್ದಾಗ ಅಪ್ಪ ಮನೆ ಬಿಟ್ಟು ಹೋಗಿದ್ದನು. ಈಗ ಮಕ್ಕಳು ದೊಡ್ಡವರು ಆಗಿದ್ದಾರೆ. ಮಕ್ಕಳು ತಮಗೆ ಬುದ್ದಿ ತಿಳಿದಾಗಿನಿಂದ ತಂದೆಗಾಗಿ ಹುಡುಕಾಟ ನಡೆಸಿ, ತಂದೆ ಬದುಕಿಲ್ಲ ಎಂದು ಕೈಚೆಲ್ಲಿ ಕೂತಿದ್ದರು . ಆದರೆ ಹೆಂಡತಿಗೆ ಮಾತ್ರ ಗಂಡನು ಇನ್ನೂ ಬದುಕಿದ್ದಾನೆ ಎನ್ನುವ ನಂಬಿಕೆಯಲ್ಲಿಯೇ ತಾಳಿಯನ್ನು ತೆಗೆಯದೆ, ಗಂಗಾಧರನಿಗಾಗಿ ಕಾಯುತ್ತಿದ್ದಳು. ಪತ್ನಿಯ ಶಬರಿ ಕಾಯುವಿಕೆಗೆ ಫಲ ಸಿಕ್ಕಿದ್ದು, ಪತಿ 24 ವರ್ಷಗಳ ನಂತರ ಗಂಗಾಧರ ಮರಳಿ ಮನೆಗೆ ಬಂದಿದ್ದಾನೆ. ಸದ್ಯ ಗಂಗಾಧರನ ತಿರುಗಿ ಬಂದಿರುವುದು ಮಕ್ಕಳು, ಹೆಂಡತಿ ಮೊಗದಲ್ಲಿ ಸಂತಸ ಮೂಡಿದೆ. ದೇವರು ನಮ್ಮ ಮನೆಗೆ ಬಂದಿದ್ದಾನೆ ಎನ್ನುವ ಮಾತುಗಳು ಮಕ್ಕಳಲ್ಲಿ ಕೇಳಿ ಬರುತ್ತಿವೆ. ಮನೆಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ.