

ಕೊಡಗು ಜಿಲ್ಲಾ ಪಂಚಾಯಿತಿ ಸಿಇಒ ಅಧಿಕಾರಿ ಡಾ. ಆಕಾಶ್ ಅವರ ಮೇಲೆ ವರದಕ್ಷಿಣೆ ಕಿರುಕುಳ ಆರೋಪದ ದೂರು ಬೆಂಗಳೂರಿನ ಪೂರ್ವ ವಿಭಾಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಡಾ. ಆಕಾಶ್ ಅವರ ಪತ್ನಿ ವಂದನಾ ಅವರೇ ಸ್ವತಃ ಬೆಂಗಳೂರಿನ ಪೂರ್ವ ವಿಭಾಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
2022ರಲ್ಲಿ ಡಾ.ವಂದನಾ ಹಾಗೂ ಐಎಎಸ್ ಅಧಿಕಾರಿ ಆಗಿದ್ದ ಡಾ. ಆಕಾಶ್ ಅವರು ಪರಸ್ಪರ ಒಪ್ಪಿಕೊಂಡು ಅದ್ಧೂರಿಯಾಗಿ ವಿವಾಹ ಆಗಿದ್ದರು. ಆದರೆ, ಒಂದು ವರ್ಷ ಕಳೆಯುವಷ್ಟರಲ್ಲಿ ಆಕಾಶ್ ಅವರ ಮನೆಯವರು ವರದಕ್ಷಿಣೆ ಕಿರುಕುಳ ನೀಡಲು ಆರಂಭಿಸಿದ್ದಾರೆ. ಅವಿನಾಶ್ ಅವರು ವರದಕ್ಷಿಣೆ ತರುವಂತೆ ಪೀಡಿಸಿದ್ದು, ಇದಕ್ಕೆ ಒಪ್ಪದ ಹಿನ್ನೆಲೆಯಲ್ಲಿ ಪತ್ನಿ ವಂದನಾ ಮೇಲೆ ಹಲ್ಲೆಯನ್ನೂ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ವರದಕ್ಷಿಣೆ ಕಿರುಕುಳ ಆರೋಪ ನೀಡಿರುವ ವಂದನಾ ತಮ್ಮ ಪತಿ ಆಕಾಶ್,ಆಕಾಶ್ ತಂದೆ- ತಾಯಿ ಹಾಗೂ ಸಹೋದರನ ವಿರುದ್ಧ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ಎಫ್ಐಆರ್ನಲ್ಲಿ ಉಲ್ಲೇಖ ಮಾಡಿದ್ದಾರೆ. ಇನ್ನು ದೂರು ದಾಖಲಾದ ತಕ್ಷಣ ಬೆಂಗಳೂರು ಪೂರ್ವ ವಿಭಾಗದ ಮಹಿಳಾ ಠಾಣೆಯಲ್ಲಿ ಆಕಾಶ್ ವಿರುದ್ಧ ವರದಕ್ಷಿಣೆ ಕಿರುಕುಳ ನೀಡಿದ ಆರೋಪದಡಿ ಪ್ರಕರಣ ದಾಖಲಾಗಿದೆ.