100 ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದ ಗ್ಯಾಂಗ್ಸ್ಟರ್ ಹಾಗೂ ರಾಜಕಾರಣಿ ಅತೀಕ್ ಅಹ್ಮದ್ ಜಮೀನನ್ನು ಈಗಾಗಲೇ ಯುಪಿ ಸರ್ಕಾರ ವಶಪಡಿಸಿಕೊಂಡಿದ್ದು, ಇದೀಗ ಆ ಭೂಮಿಯಲ್ಲಿ ಮನೆಗಳನ್ನು ನಿರ್ಮಿಸಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಡವರಿಗೆ ಹಂಚಿದ್ದಾರೆ.
ಪ್ರಯಾಗ್ರಾಜ್ ಬಳಿಯ ಲುಕರ್ಗಂಜ್ ಬಳಿ ಸ್ವಾಧೀನಪಡಿಸಿಕೊಂಡ 1131 ಚ.ಮೀ ಭೂಮಿಯಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್ 2021ರ ಡಿಸೆಂಬರ್ 26ರಂದು ವಸತಿಯೋಜನೆಗೆ ಶಂಕು ಸ್ಥಾಪನೆ ಮಾಡಿದ್ದರು. ಬಳಿಕ ಭೂಮಿಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 2 ಬ್ಲಾಕ್ಗಳಲ್ಲಿ 16 ಫ್ಲಾಟ್ಗಳನ್ನು ನಿರ್ಮಾಣ ಮಾಡಲಾಗಿದೆ.
ತಿಂಗಳ ಆರಂಭದಲ್ಲಿ ಲಾಟರಿ ಮೂಲಕ ಫ್ಲಾಟ್ಗಳನ್ನು ಹಂಚಿಕೆ ಮಾಡಲಾಗಿದೆ. ಶುಕ್ರವಾರ ಆದಿತ್ಯನಾಥ್ ಅವರು 16 ಫ್ಲಾಟ್ಗಳ ಕೀಲಿಗಳನ್ನು ಬಡವರಿಗೆ ಹಂಚಿಕೆ ಮಾಡಿದ್ದಾರೆ. ಅಧಿಕಾರಿಗಳ ಪ್ರಕಾರ ಪ್ರತಿ ಫ್ಲಾಟ್ಗಳು 41 ಚ.ಮೀ ವಿಸ್ತೀರ್ಣವನ್ನು ಹೊಂದಿದೆ. ಮನೆಗಳಲ್ಲಿ 2 ಕೊಠಡಿಗಳು, ಅಡುಗೆಮನೆ, ಶೌಚಾಲಯ ಒಳಗೊಂಡಿದೆ. ಈ ಫ್ಲಾಟ್ಗಳಿಗಾಗಿ 6,000 ಕ್ಕೂ ಹೆಚ್ಚು ಜನರು ಪುಯಾಗ್ರಾಜ್ ಅಭಿವೃದ್ಧಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ 1,590 ಜನರು ಲಾಟರಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅರ್ಹರಾಗಿದ್ದರು.
100 ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದ ಅತೀಕ್ ಹಾಗೂ ಆತನ ಸಹೋದರ ಅಶ್ರಫ್ ಅಹ್ಮದ್ ಈ ವರ್ಷದ ಏಪ್ರಿಲ್ನಲ್ಲಿ ಹತ್ಯೆಯಾದರು. ವೈದ್ಯಕೀಯ ತಪಾಸಣೆಗೆಂದು ಪ್ರಯಾಗ್ರಾಜ್ಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಪತ್ರಕರ್ತರ ಸೋಗಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಹತ್ಯೆಯ ವೇಳೆ ಅವರು ಪೊಲೀಸರ ವಶದಲ್ಲೇ ಇದ್ದರು. ಘಟನೆಗೂ ಕೆಲ ದಿನಗಳ ಮುನ್ನ ಅತೀಕ್ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ.