ದಂಪತಿಗಳಿಬ್ಬರು ಗ್ಯಾಸ್ ಗೀಸರ್ ಸೋರಿಕೆಯಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದು, 5 ವರ್ಷದ ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ದಾರುಣ ಘಟನೆ ರಾಜಸ್ಥಾನದ ಭಿಲ್ವಾರಾ ಜಿಲ್ಲೆಯಲ್ಲಿ ನಡೆದಿದೆ. ಶಹಾಪುರ ನಿವಾಸಿಗಳಾದ ಶಿವನಾರಾಯಣ ಜಾನ್ವಾರ್ (37), ಕವಿತಾ ಜಾನ್ವರ್ (35) ಮೃತ ದಂಪತಿಗಳಾಗಿದ್ದು, ಮಗ ವಿಹಾನ್ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಶೀತಲ ಅಷ್ಟಮಿ ಹಬ್ಬದ ಪ್ರಯುಕ್ತ ಬಣ್ಣದಲ್ಲಿ ಆಡುವ ವೇಳೆ ದಂಪತಿಗಳು ಹಾಗೂ ಕುಟುಂಬ ಸದಸ್ಯರು ಒಟ್ಟಿಗೆ ಸೇರಿದ್ದು, ಬಳಿಕ ಬಣ್ಣವನ್ನು ತೊಳೆಯಲು ತಮ್ಮ ಮಗನನ್ನು ಕರೆದುಕೊಂಡು ದಂಪತಿಗಳು ವಾಶ್ ರೂಮ್ ಹೋಗಿದ್ದಾರೆ. ಈ ಸಂದರ್ಭದಲ್ಲಿ ಗೀಸರ್ ಆನ್ ಮಾಡಿದ ಕೆಲವೇ ಕ್ಷಣದಲ್ಲಿ ಗೀಸರ್ ಅನಿಲ ಸೋರಿಕೆಯಾದ ಪರಿಣಾಮ ದಂಪತಿಗಳಿಗೆ ಉಸಿರುಗಟ್ಟಿ ಏನು ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ.
ಕೆಲ ಸಮಯದ ಬಳಿಕ ಕುಟುಂಬದ ಇತರ ಸದಸ್ಯರು ಬಾಗಿಲು ಬಡಿದು ಕರೆಯಲು ಯತ್ನಿಸಿದ್ದು, ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ ಬಾಗಿಲು ಒಡೆದು ನೋಡಿದ್ದಾರೆ. ಮೂವರು ಪ್ರಜ್ಞೆ ತಪ್ಪಿ ಬಿದ್ದಿರುವ ಸ್ಥಿತಿಯಲ್ಲಿ ಪತ್ತೆದ ಬಳಿಕ ಮೂವರನ್ನು ಆಸ್ಪತ್ರೆಗೆ ರವಾನಿಸಿದರು. ದಂಪತಿಗಳು ಇಬ್ಬರು ಮೃತಪಟ್ಟಿದ್ದು, ಮಗ ವಿಹಾನ್ ಬದುಕುಳಿದಿದ್ದಾನೆ ಎಂದು ಘಟನೆ ಬಗ್ಗೆ ಪೊಲೀಸರು ಮಾಹಿತಿ ನೀಡಿದರು.