ಕಡಬ: ಚಿಲ್ಲರೆ ನೀಡಿಲ್ಲವೆಂಬ ಕಾರಣಕ್ಕೆ ಕೆಎಸ್ ಆರ್ ಟಿಸಿ ಬಸ್ ನಿರ್ವಾಹಕ ವೃದ್ಧರೋರ್ವರನ್ನು ರಸ್ತೆ ಬದಿ ಇಳಿಸಿಹೋದ ಘಟನೆ ಕಡಬದಲ್ಲಿ ಶನಿವಾರ ನಡೆದಿದ್ದು, ಬಸ್ ನಿರ್ವಾಹಕನ ಈ ಅಮಾನವೀಯ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಲ್ಲುಗುಡ್ಡೆ ಶಾಂತಿಗುರಿ ನಿವಾಸಿ ಬಾಬು ಗೌಡ (75ವ.) ಅವರು ಕಾಂಚನಕ್ಕೆಂದು ಬೆಳಿಗ್ಗೆ 9 ಗಂಟೆಗೆ ಕಲ್ಲುಗುಡ್ಡೆಯಿಂದ ಪುತ್ತೂರಿಗೆ ಹೋಗುವ ಕೆಎಸ್ ಆರ್ ಟಿಸಿ ಬಸ್ಸಿಗೆ ಕಲ್ಲುಗುಡ್ಡೆಯಲ್ಲಿ ಹತ್ತಿದ್ದರು. ನಿರ್ವಾಹಕರು ಟಿಕೆಟ್ ಗೆ ದುಡ್ಡು ಕೇಳುವಾಗ 200ರೂ ನೀಡಿದ್ದರು. ಈ ಸಂದರ್ಭದಲ್ಲಿ ಚಿಲ್ಲರೆ ಇಲ್ಲ ಎಂಬ ಕಾರಣಕ್ಕೆ ನಿರ್ವಾಹಕ ಪ್ರಯಾಣಿಕನನ್ನು ಕಲ್ಲುಗುಡ್ಡೆಯಿಂದ 2 ಕಿ.ಮೀ ದೂರದ ಗೋಳಿಯಡ್ಕ ಎಂಬಲ್ಲಿ ಬಲವಂತವಾಗಿ ಇಳಿಸಿ ಹೋಗಿದ್ದಾರೆ ಎನ್ನಲಾಗಿದೆ.
ಹಿರಿಯ ನಾಗರೀಕರನ್ನು ಅರ್ಧ ದಾರಿಯಲ್ಲೇ ಇಳಿಸಿರುವ ನಿರ್ವಾಹಕನ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.ರಸ್ತೆ ಬದಿ ಏಕಾಂಗಿತಾಗಿ ನಿಂತಿದ್ದ ಬಾಬು ಗೌಡ ಅವರನ್ನು ಸ್ಥಳೀಯರೊಬ್ಬರು ಮಾತನಾಡಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದು ವೈರಲ್ ಆಗಿದೆ.