ಬೆಂಗಳೂರು: ಬೆಂಗಳೂರಿನ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣದ ಕಿಂಗ್ಪಿನ್ ಎಸ್ಡಿಪಿಐ ನಾಗವಾರ ಘಟಕ ಅಧ್ಯಕ್ಷ ಸೈಯದ್ ಅಬ್ಬಾಸ್ (38) ಎಂಬಾತನನ್ನು ರಾಷ್ಟ್ರೀಯ ತನಿಖಾ ತಂಡ (ಎನ್ಐಎ) ಬಂಧಿಸಿದೆ.
ಅಂದು ಪುಲಿಕೇಶಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸಹೋದರ ಸಂಬಂಧಿ ನವೀನ್ ಎಂಬಾತ ಫೇಸ್ಬುಕ್ನಲ್ಲಿ ವಿವಾದಾತ್ಮಕ ಹೇಳಿಕೆ ಅಪ್ಲೋಡ್ ಮಾಡಿದ್ದ. ಈ ಹಿನ್ನೆಲೆಯಲ್ಲಿ 2020ರ ಆಗಸ್ಟ್ 11ರಂದು ಕೆಜಿ ಹಳ್ಳಿ ಠಾಣೆ ಹಾಗೂ ಶಾಸಕರ ಮನೆಗೆ ಬೆಂಕಿ ಹಚ್ಚಲು ಆ ತಂಡ ಬಂದಿತ್ತು. ಅಂದು ಅಲ್ಲಿ ದೊಡ್ಡ ಮಟ್ಟದ ಗಲಭೆ ನಡೆಸಿದ್ದರು.
ತನಿಖೆ ಕೈಗೊಂಡ ಎನ್ಐಎ ಅಧಿಕಾರಿಗಳು, ಒಟ್ಟು138 ಮಂದಿಯನ್ನು ಬಂಧಿಸಿ ಫೆಬ್ರವರಿಯಲ್ಲಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ತನಿಖೆ ವೇಳೆ ಗಲಭೆ ಹಿಂದೆ ಎಸ್ಡಿಪಿಐ ನ ಕರಾಳ ಕೈಗಳು ಗೋಚರ ಆಗಿತ್ತು. ಗಲಭೆಯ ಕಿಂಗ್ಪಿನ್ ಎಸ್ಡಿಪಿಐನ ನಾಗವಾರ ಘಟಕ ಅಧ್ಯಕ್ಷ ಸೈಯದ್ ಅಬ್ಬಾಸ್ ಎಂಬುದು ಬೆಳಕಿಗೆ ಬಂದಿತ್ತು. ಕೃತ್ಯದ ಬಳಿಕ ಆರೋಪಿ ಓಟ ಕಿತ್ತಿ ತಲೆಮರೆಸಿಕೊಂಡಿದ್ದ.
ಆತನ ಬಂಧನಕ್ಕೆ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ ಎನ್ಐಎ ಅಧಿಕಾರಿಗಳು, ಬುಧವಾರ ಆರೋಪಿಯನ್ನು ಬಂಧಿಸಿ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಹಾಜರುಪಡಿಸಿ 6 ದಿನಗಳ ಕಾಲ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ನಾಗವಾರದಲ್ಲಿ ಎಸ್ಡಿಪಿಐ ಸಂಘಟನೆಯಲ್ಲಿ ಸಕ್ರಿಯವಾಗಿದ್ದ ಸೈಯದ್ ಅಬ್ಬಾಸ್, ಗಲಭೆಗೆ ಸಂಚು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ.
ಗಲಭೆಗೂ ಮೊದಲು ತನ್ನ ಸಹಚರರೊಂದಿಗೆ ಸೇರಿ ಸಂಚು ರೂಪಿಸಿ ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ಹಾಗೂ ವಾಹನಗಳು, ಕೆಜಿ ಹಳ್ಳಿ ಠಾಣೆಗೆ ಬೆಂಕಿ ಹಚ್ಚಿದ್ದ ಎಂದು ಎನ್ಐಎ ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಗಲಭೆ ಪ್ರಕರಣದಲ್ಲಿ ಎಸ್ಡಿಪಿಐನ ಕಾರ್ಯಕರ್ತರು ಸೇರಿ 138 ಮಂದಿಯನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದರು.
ಫೇಸ್ಬುಕ್, ಇನ್ಸ್ಟಾಗ್ರಾಮ್, ವಾಟ್ಸ್ಆ್ಯಪ್ಗಳಲ್ಲಿ ಪ್ರಚೋದನಾತ್ಮಕ ಹೇಳಿಕೆಗಳನ್ನು ವೈರಲ್ ಮಾಡಿ ಕೆ.ಜಿ.ಹಳ್ಳಿ ಠಾಣೆ ಮುಂದೆ ಗುಂಪು ಸೇರಿಸಿದ್ದರು. ಪೊಲೀಸರ ಮೇಲೆ ಮತ್ತು ನಾಗರಿಕರ ಮೇಲೆ ಕಲ್ಲು ತೂರಾಟ, ಪೆಟ್ರೋಲ್ ಬಾಂಬ್ ಎಸೆದು ಗಲಭೆ ನಡೆಸಿದ್ದರು. ಪೊಲೀಸ್ ಇಲಾಖೆ ಮತ್ತು ಸಾರ್ವಜನಿಕರ ವಾಹನಗಳಿಗೆ ಬೆಂಕಿ ಹಚ್ಚಿ ಹಾನಿ ಉಂಟು ಮಾಡಿದ್ದರು. ಠಾಣೆಗೂ ಬೆಂಕಿ ಹಚ್ಚಿರುವ ಬಗ್ಗೆ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಇದೀಗ ಸೈಯದ್ ಬಂಧನದ ಜತೆಗೆ ಎಸ್ಡಿಪಿಐನ ಇನ್ನೊಂದು ಮುಖ ಸಾರ್ವಜನಿಕರ ಎದುರು ಅನಾವರಣ ಆಗಿದೆ.