ಹಾಸನ: ಮೊದಲ ಮದುವೆಯನ್ನು ಮುಚ್ಚಿಟ್ಟು ಎರಡನೇ ಮದುವೆಗೆ ಸಿದ್ಧನಾಗಿದ್ದ ವಂಚಕನ ಬಣ್ಣ ನವವಧುವಿಗೆ ತಾಳಿಕಟ್ಟುವ ಕೊನೆ ಕ್ಷಣದಲ್ಲಿ ಬಯಲಾಗಿದೆ.
ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿ ಆಗಿರುವ ಮಧುಸೂದನ್ ಎಂಬಾತ 4 ವರ್ಷಗಳ ಹಿಂದೆಯೇ ವಸುಧಾ ಎಂಬಾಕೆಯನ್ನು ಮದುವೆ ಆಗಿದ್ದ.
ಆದರೆ ಆಕೆಯಿಂದ ದೂರವಾಗಿ ಲಕ್ಷ ಲಕ್ಷ ವರದಕ್ಷಿಣೆ ಚಿನ್ನಾಭರಣ ಪಡೆದುಕೊಂಡು ಮತ್ತೊಂದು ಮದುವೆ ಆಗೋಕೆ ರೆಡಿಯಾಗಿದ್ದ. ಮೊದಲ ಪತ್ನಿಗೆ ವಿಚ್ಛೇದನವನ್ನೂ ನೀಡದೆ, ಎರಡನೇ ಮದುವೆಯಾಗಲು ಗುಟ್ಟಾಗಿ ತನ್ನ ಸಹೋದರಿಯರ ಮೂಲಕ ಹಾಸನದ ಹುಡುಗಿಯೊಂದಿಗೆ ಮಧುಸೂದನ್ ಸಂಬಂಧ ಕುದುರಿಸಿದ್ದ. ಶುಕ್ರವಾರ ನಗರದ ಕಲ್ಯಾಣ ಮಂಟಪವೊಂದರಲ್ಲಿ ಹಸೆಮಣೆ ಏರಲು ಸಿದ್ಧನಾಗಿದ್ದ. ಅದಕ್ಕಾಗಿ ಎಲ್ಲ ಸಿದ್ಧತೆಯೂ ನಡೆದಿತ್ತು.
ಮಧುಸೂದನ್ ಹಾಸನದಲ್ಲಿ ಮತ್ತೊಂದು ಮದುವೆ ಆಗುತ್ತಿರುವ ವಿಷಯ ಮೊದಲ ಪತ್ನಿ ವಸುಧಾಗೆ ಗುರುವಾರ ಸಂಜೆ ಗೊತ್ತಾಗಿದೆ. ತಕ್ಷಣ ಆಕೆ ಗೂಗಲ್ನಲ್ಲಿ ಹಾಸನದ ಎಲ್ಲ ಕಲ್ಯಾಣ ಮಂಟಪಗಳ ವಿವರ ಮತ್ತು ದೂರವಾಣಿ ಸಂಖ್ಯೆಗಳನ್ನು ಸಂಗ್ರಹಿಸಿ ಕರೆ ಮಾಡಿ ವಿಷಯ ತಿಳಿಸುವ ಪ್ರಯತ್ನ ಮಾಡಿದ್ದಾಳೆ. ಮಧುಸೂದನ್ ಮದುವೆ ನಡೆಯಲಿದ್ದ ಕಲ್ಯಾಣ ಮಂಟಪದ ದೂರವಾಣಿ ಸಂಖ್ಯೆ ಲಭ್ಯವಾಗಿ ಕರೆ ಮಾಡುವಷ್ಟರಲ್ಲಿ ಶುಕ್ರವಾರ ಬೆಳಗ್ಗೆ 10 ಗಂಟೆ ದಾಟಿತ್ತು. ಆದರೆ ನವವಧುವಿನ ಅದೃಷ್ಟವೋ ಏನೋ ಇನ್ನೂ ಮುಹೂರ್ತ ನಡೆದಿರಲಿಲ್ಲ. ಹೆಣ್ಣಿನ ಮನೆಯವರಿಗೆ ವಸುಧಾ ವಿಷಯ ತಿಳಿಸಿದ್ದಾಳೆ.
ವಿಷಯ ತಿಳಿದ ತಕ್ಷಣ ಹೆಣ್ಣಿನ ಮನೆಯವರು ವಂಚಕ ಮಧುಸೂದನನ್ನು ಎಳೆದೊಯ್ದು ಕೊಠಡಿಯಲ್ಲಿ ಕೂಡಿಹಾಕಿ ಪೊಲೀಸರಿಗೆ ವಿಷಯ ತಿಳಿಸಿದರು. ಸ್ಥಳಕ್ಕೆ ಬಂದ ಪೊಲೀಸರು ವಿಚಾರಣೆ ನಡೆಸಿದಾಗ ಮಧುಸೂದನ್ ತನ್ನ ತಪ್ಪು ಒಪ್ಪಿಕೊಂಡಿದ್ದಾನೆ.
ಮದುವೆ ಆಗಿರುವ ವಿಷಯ ಗೊತ್ತಾದರೆ ಕಷ್ಟ ಎಂದು ಮೊದಲೇ ಯೋಚಿಸಿದ್ದ ವಂಚಕ ಮಧುಸೂದನ್, ಶುಕ್ರವಾರ ಮದುವೆ ಆಗಿ ಶನಿವಾರವೇ ಮಾಲ್ಡೀವ್ಸ್ಗೆ ಹನಿಮೂನ್ಗೆ ತೆರಳಲು ತನ್ನ ಮತ್ತು ನವವಧುವಿನ ಪಾಸ್ಪೋರ್ಟ್, ವೀಸಾ ಮಾಡಿಸಿ ವಿಮಾನ ಪ್ರಯಾಣದ ಟಿಕೆಟ್ ಸಹ ಬುಕ್ ಮಾಡಿಸಿದ್ದ. ಮಧುಚಂದ್ರ ಮುಗಿದ ನಂತರ ವಿಷಯ ಗೊತ್ತಾದರೆ ಏನೂ ಮಾಡಲು ಸಾಧ್ಯವಿಲ್ಲ ಎಂಬ ಲೆಕ್ಕಾಚಾರ ಆತನದ್ದಾಗಿತ್ತು.
ಒಂದು ಕಡೆ ವಂಚಕನೊಂದಿಗೆ ಮದುವೆ ಆಗುವುದು ತಪ್ಪಿತಲ್ಲ ಎಂಬ ಸಮಾಧಾನ, ಮತ್ತೊಂದೆಡೆ ಮಹೂರ್ತದ ಸಮಯದಲ್ಲಿ ಮದುವೆ ನಿಂತು ಹೋಗಿ ಮಗಳ ಭವಿಷ್ಯದ ಮೇಲೆ ಆತಂಕ ಕವಿಯಿತಲ್ಲ ಎಂಬ ದುಃಖ ಪೋಷಕರಾದರೆ ಇನ್ನೊಂದು ಕಡೆ ಮಗಳ ಬಾಳು ಉಳಿಯಿತು ಎಂದು ನಿಟ್ಟುಸಿರು ಬಿಟ್ಟಿದ್ದರೆ.