ಬಹುಶಃ ಎಲ್ಲರೂ ಕನ್ನಡದ ಕ್ರೇಜಿ ಸ್ಟಾರ್ ರವಿಚಂದ್ರನ್ ನಟಿಸಿರೋ ದೃಶ್ಯ. ಮಲಯಾಳಂನಲ್ಲಿ ಮೋಹನ್ ಲಾಲ್ ನಟಿಸಿರೋ ದೃಶ್ಯಂ.. ಅದೇ ಹೆಸರಿನಲ್ಲಿ ಹಿಂದಿಯಲ್ಲಿ ಬಂದ ಅಜಯ್ ದೇವಗನ್ ನಟನೆಯ ಸಿನಿಮಾಗಳಲ್ಲಿ ಯಾವುದಾದ್ರೊಂದು ನೊಡಿರ್ತೀರಿ.. ನೋಡಿರದಿದ್ರೂ ಕುಟುಂಬದ ರಕ್ಷಣೆಗಾಗಿ ಹೀರೋ ಹೇಗೆ ಕತೆ ಹೇಣೆದಿರ್ತಾನೆ.. ಇಡೀ ಕುಟುಂಬವೇ ಅದೇ ಕತೆಯನ್ನ ಮರುಕಳಿಸಿ ಕೊಲೆಯಿಂದ ಬಚಾವ್ ಆಗ್ತಾರೆ ಅನ್ನೋದು ಸಖತ್ ಥ್ರಿಲ್ ಕೊಟ್ಟಿತ್ತು.. ಆದ್ರೆ ಎಷ್ಟೋ ಜನರಿಗೆ ಅದೇ ಕ್ರೈಂ ಮಾಡಲು ಸ್ಫೂರ್ತಿಯಾಗಿದ್ದು ದುರ್ದೈವ.. ಅಂಥದ್ದೇ ಒಂದು ಘಟನೆ ಈಗ ಬೆಂಗಳೂರಿನಲ್ಲಿ ನಡೆದಿದೆ.. ಆದ್ರೆ ಇಲ್ಲಿ ಪೊಲೀಸರು ರಂಗೋಲಿ ಕೆಳಗೇ ನುಸುಳಿದ್ದರಿಂದ ಆ ಕುಟುಂಬ ಅಂದರ್ ಆಗಿದೆ..
ದೃಶ್ಯಂನಿಂದ ಸ್ಫೂರ್ತಿ. ಪ್ರಥಮ ಪ್ರಯತ್ನದಲ್ಲೇ ಗೆಲುವು
ಬೆಂಗಳೂರು ಬಳಿಯ ಆನೇಕಲ್ನ ಕುಟುಂಬವೊಂದು ದೃಶ್ಯಂ ಸಿನಿಮಾದಿಂದ ಸ್ಫೂರ್ತಿಗೊಂಡು ಒಂದು ಖತರ್ನಾಕ್ ಪ್ಲಾನ್ ರೂಪಿಸಿತ್ತು. ಕುಟುಂಬದ ಮುಖ್ಯಸ್ಥ 55 ವರ್ಷದ ರವಿ ಪ್ರಕಾಶ್, ಆತನ 30 ವರ್ಷದ ಮಗ ಮಿಥುನ್ ಕುಮಾರ್, ಸೊಸೆ ಸಂಗೀತಾ, ಮಗಳು ಆಶಾ, ಅಳಿಯ ನಲ್ಲು ಚರಣ್ ರಕ್ತ ಹರಿಸದೇ ಸಿರಿವಂತರಾಗೋ ಪ್ಲಾನ್ಗೆ ಕೈ ಜೋಡಿಸಿದ್ದರು.
ಅದರಂತೆ ಕೆಲ ತಿಂಗಳ ಹಿಂದೆ ತಮ್ಮ ಗೋಲ್ಡ್ ಕಳೆದು ಹೋಗಿದೆ ಅಂತ ಪೊಲೀಸ್ ಕಂಪ್ಲೆಂಟ್ ಕೊಟ್ಟಿದ್ದರು. ಈ ಐನಾತಿಗಳು ತಮ್ಮ ಸ್ನೇಹಿತನೊಬ್ಬನನ್ನು ಬಳಸಿ ಮೊದಲೇ ಆ ಚಿನ್ನವನ್ನ ಬೆಂಗಳೂರಿನ ಹಲವು ಪಾವನ್ ಬ್ರೋಕರ್ಸ್ ಬಳಿ ಅಡ ಇಡಿಸಿದ್ರು.. ಆದ್ರೆ ಈ ಬಗ್ಗೆ ಮಾಹಿತಿ ಇಲ್ಲದ ಪೊಲೀಸರು, ಪ್ರಾಮಾಣಿಕವಾಗಿ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ್ರು.. ಅವರ ಚಿನ್ನವನ್ನು ಹುಡುಕಿ ತಂದು ಕೊಟ್ಟಿದ್ದರು.. ಈ ಐನಾತಿಗಳು ಒಂದೇ ಸ್ಟೋರಿಯನ್ನ ಪದೇ ಪದೆ ಹೇಳಿ ಚಿನ್ನ ತಮ್ಮ ಮನೆಯಿಂದ ಕಳ್ಳತನವಾಗಿತ್ತು ಅನ್ನೋದನ್ನ ಪೊಲೀಸರಿಗೂ ನಂಬಿಸಿ ಬಿಟ್ಟಿದ್ದರು. ಯಾವಾಗ ತಮ್ಮ ಈ ಪ್ಲಾನ್ ಸಕ್ಸೆಸ್ ಆಯ್ತೋ.. ಈ ಐನಾತಿಗಳ ಕುಟುಂಬ ಸಾಕಷ್ಟು ಸಂಭ್ರಮ ಪಟ್ಟಿತ್ತು.
ಮತ್ತೊಂದು ಬಾರಿ ಅಂಥದ್ದೇ ಪ್ಲಾನ್..!
ಮೊದಲ ಪ್ರಯತ್ನದಲ್ಲೇ ಪೊಲೀಸರನ್ನು ಯಾಮಾರಿಸುವಲ್ಲಿ ಸಕ್ಸೆಸ್ ಪಡೆದಿದ್ದ ಈ ಕುಟುಂಬ, ಎರಡನೇ ಬಾರೀ ಮತ್ತಷ್ಟು ದೊಡ್ಡ ಪ್ಲಾನ್ ಮಾಡಿತ್ತು.. ಈ ಬಾರಿ ತಮ್ಮ ಡ್ರೈವರ್ ದೀಪಕ್ ಹಾಗೂ ಸ್ನೇಹಿತೆ ಆಸ್ಮಾ ಅನ್ನೋವಾಕೆಯ ಸಹಯಾವನ್ನೂ ಪಡೆದುಕೊಂಡ್ರು.. ಈ ಬಾರಿ ಸುಮಾರು 1250 ಗ್ರಾಂ ಚಿನ್ನವನ್ನು ಸಂಗ್ರಹಿಸಿದ.. ಅದು ಕಳ್ಳತನವಾದ ಪ್ಲಾನ್ ರೂಪಿಸಿದ್ರು.. ಜೊತೆಗೆ ದೀಪಕ್ ಬೇಲ್ ಕೊಡಿಸೋ ಜವಾಬ್ದಾರಿಯನ್ನ ಹೊತ್ತ ರವಿಪ್ರಕಾಶ್, ಒಂದಷ್ಟು ಹಣ ನೀಡೋದಾಗಿಯೂ ಹೇಳಿದ್ದ.
ಪ್ಲಾನಡ್ ಕಳ್ಳತನಕ್ಕೆ ಯೋಜನೆ ಸಿದ್ಧ
ಪ್ಲಾನ್ ಮಾಡಿದಂತೆ ರವಿಪ್ರಕಾಶ್ ಮಗಳು ಆಶಾ ಸೆಪ್ಟಂಬರ್ 19, 2021ರಂದು ಬೆಂಗಳೂರಿನ ಸರ್ಜಾಪುರ ಪೋಲಿಸ್ ಸ್ಟೇಷನ್ನಲ್ಲಿ ಒಂದು ದೂರು ದಾಖಲಿಸ್ತಾಳೆ.. ತಾನು ಬಟ್ಟೆ ಶಾಪಿಂಗ್ಗೆ ಹೋಗಿದ್ದಾಗ ತನ್ನ ಬ್ಯಾಗ್ ಅನ್ನ ವ್ಯಕ್ತಿಯೊಬ್ಬ ಕಳ್ಳತನ ಮಾಡಿದ್ದಾನೆ.. ಆ ಬ್ಯಾಗ್ನಲ್ಲಿ 30 ಸಾವಿರ ರೂಪಾಯಿ ನಗದು, ಒಂದು ಮೊಬೈಲ್ ಫೋನ್ ಹಾಗೂ ಬರೋಬ್ಬರಿ 1250 ಗ್ರಾಂ ಚಿನ್ನ ಇತ್ತು ದೂರಿನಲ್ಲಿ ನಮೂದಿಸಿರ್ತಾಳೆ.. ಅದೇ ಕಥೆಯನ್ನ ಕುಟುಂಬ ಸದಸ್ಯರೆಲ್ಲ ಮತ್ತೆ ವಿವರವಾಗಿ ಇಂಡಿವಿಜುವಲ್ ಆಗಿ ವಿವರಣೆ ನೀಡ್ತಾರೆ..
ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸುತ್ತಾರೆ.. ಬಟ್ಟೆ ಅಂಗಡಿಗೆ ಹೋಗಿ ಸಿಸಿ ಕ್ಯಾಮರಾ ಚೆಕ್ ಮಾಡ್ತಾರೆ.. ಆಗ ಬ್ಯಾಗ್ ಕಿತ್ತುಕೊಂಡು ಹೋಗಿರೋನ ಗುರ್ತಿಸಿ ಆತನನ್ನು ಅರೆಸ್ಟ್ ಮಾಡ್ತಾರೆ.. ಹಾಗೆ ಅರೆಸ್ಟ್ ಆದ ವ್ಯಕ್ತಿ ಬೇರಾರು ಅಲ್ಲ.. ಆತನೇ ಕಾರ್ ಡ್ರೈವರ್ ದೀಪಕ್.. ಪೊಲೀಸ್ ಭಾಷೆಯಲ್ಲಿ ಆತನನ್ನು ಚೆನ್ನಾಗಿ ವಿಚಾರಣೆ ಮಾಡ್ತಾರೆ.. ಆಗ ಆತ ಚಿನ್ನವನ್ನು ಒತ್ತೆ ಇಟ್ಟ ಅಂಗಡಿಗಳ ಬಗ್ಗೆ ಮಾಹಿತಿ ಕೊಡ್ತಾನೆ.. ಹೀಗಾದಾಗ.. ಪೊಲೀಸರು ಸುಮಾರು 500 ಗ್ರಾಂ ಚಿನ್ನವನ್ನ ವಶಕ್ಕೆ ಪಡೀತಾರೆ.. ಆ ಚಿನ್ನ ತಮ್ಮದೇ ಅಂತ ಕುಟುಂಬ ಕೂಡ ಒಪ್ಪಿಕೊಳ್ಳುತ್ತೆ.. ಆದ್ರೆ ಪೊಲಿಸ್ ಮೂಗಿಗೆ ಆಗ ಬೇರೊಂದು ವಾಸನೆ ಬಡೆಯಲು ಆರಂಭವಾಗಿಬಿಟ್ಟಿರುತ್ತೆ.
ಸಿಕ್ಕಿ ಹಾಕಿಕೊಂಡ ಐನಾತಿ ಗ್ಯಾಂಗ್
ಪೊಲೀಸರು ಹಾಗೆ ಚಿನ್ನವನ್ನು ವಶಕ್ಕೆ ಪಡೆದಾಗ ಅದ್ರಲ್ಲಿ ಮುಸ್ಲಿಂ ಮಹಿಳೆಯರು ಧರಿಸುವ ಕೆಲವು ವಿಶಿಷ್ಟ ಡಿಸೈನ್ ಚಿನ್ನದ ಆಭರಣ ಕೂಡ ಇರುತ್ತೆ.. ಈ ಚಿನ್ನ ಇವರದ್ದು ಹೇಗೆ ಆಗಿರಲು ಸಾಧ್ಯ? ಅನ್ನೋ ಸಣ್ಣ ಸಂಶಯ ಅವರಲ್ಲಿ ಮೂಡುತ್ತೆ.. ಆಗ ಪೊಲೀಸರು ದೀಪಕ್ನನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸುತ್ತಾರೆ.. ಆಗ ಆತ ಸಂಪೂರ್ಣ ವೃತ್ತಾಂತವನ್ನ ಬಾಯಿ ಬಿಡ್ತಾನೆ.. ದೀಪಕ್ನ ಮಾಹಿತಿ ಆಧರಿಸಿ ಸದ್ಯ ಪೊಲೀಸರು ಇಡೀ ಕುಟುಂಬವನ್ನ ವಶಕ್ಕೆ ಪಡೆದಿದ್ದು.. ವಿಚಾರಣೆ ಮುಂದುವರೆಸಿದ್ದಾರೆ.