ಕುಡಿದು ಗಲಾಟೆ ಮಾಡಿ ಕಿರುಕುಳ ನೀಡುತ್ತಿದ್ದ ಗಂಡನನ್ನು ಹೆಂಡತಿಯೊಬ್ಬಳು ದೋಸೆ ಕಾವಲಿಯಿಂದ ಹೊಡೆದು ಕೊಂದ ಘಟನೆ ನೆರೆಯ ತಮಿಳುನಾಡಿನಲ್ಲಿ ನಡೆದಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಈ ಕೊಲೆ ಪ್ರಕರಣ ಬಯಲಾಗಿದೆ. ಪತಿ 42 ವರ್ಷದ ರವಿಕುಮಾರ್ ಎಂಬಾತನನ್ನು ಪತ್ನಿ 36 ವರ್ಷದ ಜ್ಯೋತಿಮಣಿ ದೋಸೆ ಕಾವಲಿಯಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾಳೆ. ತಿರುಪ್ಪುರ್ ಜಿಲ್ಲೆಯ ಸೆಂಥಿಲ್ ನಗರದಲ್ಲಿ ಈ ಘಟನೆ ನಡೆದಿದೆ.
ಕಂಠಪೂರ್ತಿ ಕುಡಿದು ಮನೆಗೆ ಬಂದ ರವಿಕುಮಾರ್ ಹೆಂಡತಿಗೆ ಒಂದೇ ಸಮನೇ ಹೊಡೆಯಲು ಶುರು ಮಾಡಿದ್ದಾನೆ. ಈ ವೇಳೆ ಈತನ ಕಿರುಕುಳ ಸಹಿಸಲಗದ ಜ್ಯೋತಿಮಣಿ ದೋಸೆ ಕಾವಲಿಯಿಂದ ರವಿಕುಮಾರ್ ತಲೆಗೆ ಹೊಡೆದಿದ್ದಾರೆ. ಈ ವೇಳೆ ಪ್ರಜ್ಞೆ ತಪ್ಪಿ ಬಿದ್ದ ರವಿಕುಮಾರ್ ಮತ್ತೆ ಮೇಲೆದ್ದಿಲ್ಲ. ನಂತರ ಜ್ಯೋತಿಮಣಿ ಆತನನ್ನು ಆಂಬ್ಯುಲೆನ್ಸ್ ಮೂಲಕ ಈರೋಡ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾಳೆ. ನಂತರ ಆತನಿಗೆ ಹೃದಯಾಘಾತವಾಗಿದೆ ಎಂದು ಹೇಳಿದ್ದಾರೆ.
ರವಿಕುಮಾರ್ ಕುಟುಂಬದವರು ಅಂತ್ಯಕ್ರಿಯೆ ನಡೆಸಲು ಸಕಲ ಸಿದ್ಧತೆ ನಡೆಸಿದ್ದಾರೆ. ಆದರೆ ರವಿಕುಮಾರ್ ತಂದೆಗೆ ತಮ್ಮ ಮಗನ ಸಾವಿನ ಬಗ್ಗೆ ಸಂಶಯ ಮೂಡಿದ್ದು, ತಿರುಮುರುಗನ್ಪೂಂಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಂತರ ಮೃತ ರವಿಕುಮಾರ್ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಆದರೆ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಆತನ ಮೇಲೆ ಗಟ್ಟಿಯಾದ ವಸ್ತುವೊಂದರಿಂದ ಹಲ್ಲೆ ಮಾಡಲಾಗಿದ್ದು, ದೇಹದಲ್ಲಿ ಗಾಯಗಳಿವೆ ಎಂದು ತಿಳಿದು ಬಂತು. ಇದಾದ ಬಳಿ ಬಳಿಕ ಪೊಲೀಸರು ಪತ್ನಿ ಜ್ಯೋತಿಮಣಿಯನ್ನು ವಿಚಾರಣೆ ನಡೆಸಿದಾಗ ಆಕೆ ಪತಿ ರವಿಕುಮಾರ್ ಅವರನ್ನು ಕೊಂದಿರುವ ಬಗ್ಗೆ ಒಪ್ಪಿಕೊಂಡಿದ್ದಾಳೆ. ಕುಡಿದು ಬಂದು ದಿನಾ ಹಿಂಸೆ ಮಾಡುತ್ತಿದ್ದಿದ್ದರಿಂದ ತಾಳ್ಮೆಗೆಟ್ಟು ದೋಸೆ ಕಾವಲಿಯಿಂದ ಹೊಡೆದು ಕೊಲೆ ಮಾಡಿದ್ದಾಗಿ ಆಕೆ ಹೇಳಿಕೊಂಡಿದ್ದಾಳೆ. ಬಳಿಕ ಜ್ಯೋತಿಮಣಿಯನ್ನು ಪೊಲೀಸರು ಬಂಧಿಸಿದ್ದಾರೆ.