ದೇಶದಲ್ಲಿ ಹೆಚ್ಚುತ್ತಿರುವ ದ್ವೇಷ ಭಾಷಣ ಮತ್ತು ಜಾತಿ-ಧರ್ಮ ಆಧಾರಿತ ಹಿಂಸಾಚಾರಗಳನ್ನು ಹತ್ತಿಕ್ಕಬೇಕು ಎಂದರೆ ನೀವು ಈ ಬಗ್ಗೆ ಮಾತನಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನ ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ಗುಂಪು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದೆ.
ಬಹಿರಂಗ ಪತ್ರ ಬರೆದಿರುವ ಅವರು, ನಿಮ್ಮ ಮೌನವೆಂಬುದು ದ್ವೇಷ ತುಂಬಿದ ಧ್ವನಿಗಳಿಗೆ ಇನ್ನಷ್ಟು ಉತ್ತೇಜನ ನೀಡುತ್ತಿದೆ ಎಂದು ಹೇಳಿದ್ದಾರೆ. ಈಗೀಗ ಹೆಚ್ಚುತ್ತಿರುವ ದ್ವೇಷ ಭಾಷಣ, ಜಾತಿ ಆಧಾರಿತ ಹಿಂಸಾಚಾರಗಳು ದೇಶದ ಏಕತೆ ಮತ್ತು ಸಮಗ್ರತೆಗೆ ಅಪಾಯವೊಡ್ಡುತ್ತಿವೆ. ಈ ವಿಭಜಿತ ಶಕ್ತಿಗಳ ವಿರುದ್ಧ ನೀವು ಗಟ್ಟಿಯಾಗಿ ನಿಲ್ಲಬೇಕು. ಅದನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ವೃಂದ ಪತ್ರದಲ್ಲಿ ಉಲ್ಲೇಖಿಸಿದೆ.
ಇತ್ತೀಚೆಗೆ ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್ ಸಮಾರಂಭ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಅದರಲ್ಲಿ ಪಾಲ್ಗೊಂಡಿದ್ದ ಹಿಂದೂ ಧಾರ್ಮಿಕ ಮುಖಂಡರು, ದೇಶದಲ್ಲಿ ಜನರು ಮುಸ್ಲಿಮರ ವಿರುದ್ಧ ಕತ್ತಿ ಎತ್ತಬೇಕು ಎನ್ನುತ್ತ, ನರಮೇಧಕ್ಕೆ ಕರೆ ನೀಡಿದ್ದರು. ಆ ಸಮಾರಂಭದಲ್ಲಿ ಪಾಲ್ಗೊಂಡವರ ವಿರುದ್ಧ ಪ್ರಕರಣ ಕೂಡ ದಾಖಲಾಗಿದೆ. ಅದರ ಬೆನ್ನಲ್ಲೇ ವಿದ್ಯಾರ್ಥಿಗಳು ಪತ್ರ ಬರೆದಿದ್ದಾರೆ.
ಹೀಗೆ ಜಾತಿ, ಧರ್ಮ ಆಧಾರಿತ ಹಿಂಸಾಚಾರಗಳು, ಅದನ್ನು ಪ್ರಚೋದಿಸುವ ಹೇಳಿಕೆಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಪ್ರತಿಯೊಬ್ಬನಿಗೂ ತನ್ನ ಧರ್ಮವನ್ನು ಘನತೆಯಿಂದ ಆಚರಿಸುವ ಹಕ್ಕನ್ನು ಭಾರತದ ಸಂವಿಧಾನ ನೀಡಿದೆ. ಆದರೆ ಈಗ ಅದನ್ನು ಮಾಡಲೂ ಭಯ ಶುರುವಾಗಿದೆ. ಚರ್ಚ್ಗಳು ಸೇರಿ ಪೂಜೆ ನಡೆಯುವ ಇನ್ನಿತರ ಸ್ಥಳಗಳೆಲ್ಲ ಧ್ವಂಸಗೊಳ್ಳುತ್ತಿವೆ. ಮುಸ್ಲಿಮರ ವಿರುದ್ಧ ಶಸ್ತ್ರಾಸ್ತ್ರಗಳನ್ನು ಎತ್ತಿಕೊಳ್ಳುವಂತೆ ಬಹಿರಂಗವಾಗಿ ಕರೆನೀಡಲಾಗುತ್ತಿದೆ. ಇವೆಲ್ಲವನ್ನೂ ನಿರ್ಭಯದಿಂದ ನಡೆಸಲಾಗುತ್ತಿದೆ. ಹಾಗಾಗಿ ಪ್ರಧಾನಿಯಾದ ನೀವು ಮಧ್ಯಪ್ರವೇಶಿಸಲೇಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.