ಧರ್ಮಸ್ಥ ಳ: ಜಮೀನು ದಾಖಲಾತಿ ವಿಚಾರವಾಗಿ ಇಬ್ಬರ ಮಧ್ಯೆ ನಡೆದ ವಿವಾದದಲ್ಲಿ ಹಲ್ಲೆಗೊಳಗಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಸಾವನ್ನಪ್ಪಿದ ಘಟನೆ ನಡೆದಿದೆ. ಧರ್ಮಸ್ಥಳ ಗ್ರಾಮದ ಕನ್ಯಾಡಿ ನಿವಾಸಿ ಧರ್ಣಪ್ಪ ನಾಯ್ಕರವರ ಪುತ್ರ ದಿನೇಶ್ (40.ವ) ಎಂಬವರು ಘಟನೆಯಲ್ಲಿ ಮೃತಪಟ್ಟಿದ್ದಾರೆ. ಹಲ್ಲೆ ನಡೆಸಿದವರ ವಿರುದ್ಧ ಮೃತರ ತಾಯಿ ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆಯ ವಿವರ: ಫೆ.23 ರಂದು ಬೆಳಿಗ್ಗೆ ಕೂಲಿ ಕಾರ್ಮಿಕ ದಿನೇಶ್ ಹಾಗೂ ಕನ್ಯಾಡಿಯಲ್ಲಿ ಅಂಗಡಿ ಹೊಂದಿರುವ ಕೃಷ್ಣ ಡಿ ಎಂಬವರ ನಡುವೆ ಜಮೀನಿನ ದಾಖಲಾತಿಗಳನ್ನು ಮಾಡಿಕೊಟ್ಟಿರುವ ವಿಚಾರವಾಗಿ ವಿವಾದ ನಡೆದಿದ್ದು , ಈ ವೇಳೆ ಕೃಷ್ಣರವರು ದಿನೇಶ್ ಅವರಿಗೆ ಹಲ್ಲೆ ನಡೆಸಿದ್ದಾರೆಂದು ಮೃತರ ತಾಯಿ ಪದ್ಮಾವತಿ ದೂರಿನಲ್ಲಿ ಆರೋಪಿಸಿದ್ದಾರೆ.
ಹಲ್ಲೆ ನಡೆದ ಬಳಿಕ ಮನೆಗೆ ಮರಳಿದ ದಿನೇಶ ಅವರಿಗೆ ರಾತ್ರಿ ವೇಳೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು , ತಾನು ಹಲ್ಲೆ ನಡೆಸಿದ್ದ ಕೃಷ್ಣರಿಗೆ ಪೋನಾಯಿಸಿ ತನ್ನ ಮಗನಿಗೆ ಹಲ್ಲೆ ನಡೆಸಿರುವ ಕಾರಣ ಆತ ಅಸ್ವಸ್ಥಗೊಂಡಿದ್ದು , ಕೂಡಲೇ ಆತನಿಗೆ ಚಿಕಿತ್ಸೆ ಕೊಡಿಸುವಂತೆ ತಿಳಿಸಿ, ಬಳಿಕ ಕೃಷ್ಣ ಹಾಗೂ ದಿನೇಶನ ಪತ್ನಿ ಮರುದಿನ ದಿನೇಶನನ್ನು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದ ರು. ಹಲ್ಲೆಯ ಪರಿಣಾಮದಿಂದಾಗಿ ಹೊಟ್ಟೆಯ ಒಳ ಅಂಗಾಂಗಗಳಿಗೆ ತೀವ್ರ ತರಹದ ಗಾಯಗಳುಂಟಾದ ಕಾರಣ ಚಿಕಿತ್ಸೆಗೆ ಸ್ಪಂದಿಸದೆ ಫೆ.25 ರಂದು ಸಾವನ್ನಪ್ಪಿದ್ದಾರೆ ಎಂದುದೂರಿನಲ್ಲಿ ತಿಳಿಸಿದ್ದಾರೆ.
ಕೃಷ್ಣ ತಾನು ಮಾಡಿದ ತಪ್ಪನ್ನು ಮರೆ ಮಾಚುವ ಉದ್ದೇಶದಿಂದ ದಿನೇಶನು ಮೆಟ್ಟಿಲಿನಿಂದ ಬಿದ್ದಿರುತ್ತಾನೆ ಎಂಬುವುದಾಗಿ ಆಸ್ಪತ್ರೆಯ ವೈದ್ಯರಲ್ಲಿ ಹೇಳಿದ್ದಾರೆ ಎಂದು ಮೃತರ ತಾಯಿ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ. ಈ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ತನಿಖೆ ಮುಂದುವರೆದಿದೆ.