ಹಿಂದೂ ಧರ್ಮದಲ್ಲಿ ಬಹುದೇವತಾ ಆರಾಧನೆ ಮಾನ್ಯತೆ ಪಡೆದು ಜನರ ಇಷ್ಟಾರ್ಥಗಳನ್ನು ಪೂರೈಸಿಕೊಂಡು ಧನ್ಯತೆಯೊಂದಿಗೆ ಅನೇಕ ಕ್ಷೇತ್ರಗಳ ಬೆಳವಣಿಗೆಗೂ, ಅಭಿವೃದ್ಧಿಗೂ ಪೂರಕವಾಗಿದೆ.
ವಿಟ್ಲ ಸಮೀಪದ ನೆಕ್ಕರೆಕಾಡು ಎಂಬಲ್ಲಿ ರಕ್ತೇಶ್ವರಿ, ಗುಳಿಗ ಬನವಿದ್ದು ಇತ್ತೀಚೆಗೆ ಬನದ ಬೃಹತ್ ಗಾತ್ರದ ಮರ ಉರುಳಿ ಬಿದ್ದು ಬನಕ್ಕೆ ಹಾನಿಯಾಗಿತ್ತು. ಈ ಹಿನ್ನಲೆ ವಿಟ್ಲ ಅರಮನೆಯ ಮುಂದಾಳತ್ವದಲ್ಲಿ ಗುರು ಪ್ರಸಾದ್ ಬಡಕ್ಕಿಲ್ಲಾಯರ ಮಾರ್ಗದರ್ಶನದಲ್ಲಿ ಸ್ಥಳ ಪ್ರಶ್ನೆ ಚಿಂತನೆ ನಡೆಸಲಾಗಿತ್ತು. ಸ್ಥಳ ಪ್ರಶ್ನೆ ಚಿಂತನೆಯಲ್ಲಿ ಕಂಡು ಬಂದ ದೋಷಗಳ ನಿವೃತ್ತಿಗಾಗಿ ಪ್ರಾಯಶ್ಚಿತ್ತಾದಿ ಹೋಮಗಳನ್ನು, ಸಾನಿಧ್ಯ ವೃದ್ಧಿಗಾಗಿ ವಿಶೇಷ ಪೂಜೆ ಹಾವನಾದಿಗಳನ್ನು ವೈದಿಕ ವರ್ಗದ ಸಹಕಾರದೊಂದಿಗೆ ಮಾಡಲಾಗಿತ್ತು.
ಈ ಕ್ಷೇತ್ರದಲ್ಲಿ ರಕ್ತೇಶ್ವರಿ, ಗುಳಿಗ, ನಾಗದೇವರ ಆರಾಧನೆಯನ್ನು ನಡೆಸಿಕೊಂಡು ಬರುತ್ತಿದ್ದು, ಜೀರ್ಣೋದ್ದಾರ ಸಮಿತಿ ರಚಿಸಿ ಪ್ರಕೃತಿ ರಮಣೀಯ ಸ್ಥಳದಲ್ಲಿ ವಾಸ್ತುಪ್ರಕಾರವಾಗಿ ನಿರ್ಮಿಸಲ್ಪಟ್ಟ ರಕ್ತೇಶ್ವರಿ, ಗುಳಿಗ, ಮತ್ತು ನಾಗಶಿಲೆ ಪ್ರತಿಷ್ಠಾ ಕಾರ್ಯಕ್ರಮ ಗುರುಪ್ರಸಾದ್ ಬಡೆಕ್ಕಿಲ್ಲಾಯರ ನೇತೃತ್ವದಲ್ಲಿ ನಡೆಯಿತು.
ಬೆಳಗ್ಗೆ ಗಣಪತಿ ಹೋಮ, ಪ್ರತಿಷ್ಠಾ ಪ್ರಧಾನ ಹೋಮ, ಪಂಚವಿಂಶತಿ ಕಲಶಾರಾಧನೆ, ಪ್ರಧಾನ ಹೋಮ ನಡೆಯಿತು. ಊರಿನ ಮಕ್ಕಳು ಭಜನಾ ಸಂಕೀರ್ತನೆ ನಡೆಸಿಕೊಟ್ಟರು. ಬಳಿಕ ನಾಗಶಿಲಾ ಪ್ರತಿಷ್ಠೆ, ರಕ್ತೇಶ್ವರಿ ಮತ್ತು ಗುಳಿಗ ದೈವದ ಪ್ರತಿಷ್ಠೆ ಕಲಶಾಭಿಷೇಕ, ಅಶ್ಲೇಷ ಬಲಿ, ಮಹಾಪೂಜೆ ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು. ನೂರಾರು ಭಾಕ್ತಾದಿಗಳು ಕಾರ್ಯಕ್ರಮಲ್ಲಿ ಉಪಸ್ಥಿತರಿದ್ದರು.