ಪಡುಬಿದ್ರೆ: ವರದಕ್ಷಿಣೆ ನೀಡದಿದ್ದರೆ ತಲಾಕ್ ನೀಡುವುದಾಗಿ ಬೆದರಿಕೆಯೊಡ್ಡಿದ ಕುರಿತು ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಇನ್ನಾ ನಿವಾಸಿ ಝೀನತ್ ಎಂಬುವವರು ತನ್ನ ಗಂಡ ಸೇರಿದಂತೆ ಒಟ್ಟು ಏಳು ಮಂದಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಝೀನತ್ ನಾಲ್ಕು ವರ್ಷದ ಹಿಂದೆ ಕಾಪು ತಾಲೂಕು ನಡ್ಸಾಲು ಗ್ರಾಮ ನಿವಾಸಿ ಮೊಹಮ್ಮದ್ ಇಲಿಯಾಸ್ ಎಂಬುವವರನ್ನು ವಿವಾಹವಾಗಿದ್ದರು. ಮದುವೆಯ ಹೊಸದರಲ್ಲಿ ಗಂಡನ ಮನೆಯವರು ಅನೋನ್ಯವಾಗಿದ್ದಂತೆ ನಟಿಸಿ, ಬಳಿಕ ಮದುವೆಯ ಸಮಯ ನೀಡಿದ ಚಿನ್ನದ ಒಡವೆ ಮತ್ತು ವರದಕ್ಷಿಣೆ ಹಣ ಸಾಕಾಗಲಿಲ್ಲವೆಂದು ಜಗಳ ಪ್ರಾರಂಭಿಸಿದ್ದಾರೆ. ಅಲ್ಲದೆ ಝೀನತ್ಳ ಮನೆಯವರ ಕುರಿತು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ. ಆರೋಪಿತರಾದ ಜೀನತ್, ಶಮಿನಾ, ಅತ್ತೆ ಬಿಫಾತಿಮಾ, ಮಾವ ಇಬ್ರಾಹಿಂ, ನಾದಿನಿಯ ಗಂಡ ಅಬ್ದುಲ್ ಸಲಾಂ ಹಲ್ಲೆ ನಡೆಸಲು ಪ್ರಚೋದನೆ ನೀಡಿದ್ದಲ್ಲದೆ, ಬೆಲ್ಟ್ ಆಗೂ ಕೈನಿಂದ ಹೊಡೆದು ದೈಹಿಕ ಹಲ್ಲೆ ನಡೆಸಿದ್ದಾರೆ.
ಆರೋಪಿ ಮಹಮದ್ ವಿದೇಶದಲ್ಲಿದ್ದಾಗಲೂ ಹಿಂಸೆಗೆ ಪ್ರಚೋದನೆ ನೀಡುತ್ತಿದ್ದು, ಊರಿಗೆ ಬಂದ ಬಳಿಕವೂ ಹಿಂಸೆ ನೀಡಿದ್ದನು. ಝೀನತ್ ಇವರ ಕಿರುಕುಳದಿಂದ ಬೇಸತ್ತು ತಾಯಿಯ ಮನೆಗೆ ಹೋದಾಗ, ಆರೋಪಿತರು ಅಲ್ಲಿಗೂ ಬಂದು ಬೈದು ಹಲ್ಲೆ ನಡೆಸಿರುತ್ತಾರೆ. ಇದರಿಂದ ಮನನೊಂದು ಝೀನತ್ ಕೆಲ ದಿನಗಳ ಹಿಂದೆ ಯಾರಿಗೂ ಹೇಳದೇ ಮಗುವಿನೊಂದಿಗೆ ಮನೆ ಬಿಟ್ಟು ಹೋಗಿದ್ದು, ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ಬಳಿಕ ಉಳ್ಳಾಲ ದರ್ಗಾದ ಬಳಿ ಇವರನ್ನು ಪತ್ತೆ ಮಾಡಿದ್ದು, ನಂತರ ಝೀನತ್ ತನ್ನ ಮಗುವಿನೊಂದಿಗೆ ತಾಯಿಯ ಮನೆಗೆ ಹೋಗಿದ್ದರು. ನಂತರವೂ ಆರೋಪಿಗಳು ಝೀನತ್ ರವರಿಗೆ ಹಾಗೂ ಅವರ ಮನೆಯವರಿಗೆ ಮೊಬೈಲ್ ಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.