ಪುತ್ತೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಎಸ್ಡಿಪಿಐ ಪಕ್ಷ ತನ್ನ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಬೆಂಗಳೂರಿನಲ್ಲಿ ಪಕ್ಷದ ರಾಷ್ಟ್ರಾಧ್ಯಕ್ಷ ಎಮ್.ಕೆ ಫೈಜಿ ಎರಡನೇ ಪಟ್ಟಿ ಬಿಡುಗಡೆ ಮಾಡಿದ್ದು, 9 ಮಂದಿ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದ್ದಾರೆ.
ಪುತ್ತೂರಿನಲ್ಲಿ ಶಾಫಿ ಬೆಳ್ಳಾರೆ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದು, ರಾಯಚೂರಿನಿಂದ ಸಹೀದ್ ಇಸಾಕ್ ಉಸೇನ್, ತೇರದಾಳದಿಂದ ಯಮನಪ್ಪ ಗುಣದಾಳ್, ಮೂಡಿಗೆರೆಯಿಂದ ಅಂಗಡಿ ಚಂದು, ಬಿಜಾಪುರ ನಗರದಿಂದ ಅತಾವುಳ್ಳ ದ್ರಾಕ್ಷಿ , ಮಂಗಳೂರು ಉಳ್ಳಾಲದಿಂದ ರಿಯಾಝ್ ಫರಂಗಿಪೇಟೆ, ಕಲಬುರ್ಗಿ ಉತ್ತರದಿಂದ ರಹೀಮ್ ಪಟೇಲ್ ಮತ್ತು ಹುಬ್ಬಳ್ಳಿ ಪೂರ್ವದಿಂದ ಡಾ. ವಿಜಯ್ಎಮ್. ಗುಂದ್ರಾಲ್ ಹೆಸರುಗಳನ್ನು ಘೋಷಿಸಲಾಗಿದೆ.
ಶಾಫಿ ಬೆಳ್ಳಾರೆ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಆತ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಈಗಾಗಲೇ ಭಾರೀ ವಿರೋಧ ವ್ಯಕ್ತವಾಗುತ್ತಿದೆ.
ದ.ಕ ವಿಧಾನ ಸಭಾ ಕ್ಷೇತ್ರದಲ್ಲಿ ಸತತ ಗೆಲುವಿನ ಸರದಾರ ಉಳ್ಳಾಲ ಕ್ಷೇತ್ರದ ಕಾಂಗ್ರೆಸ್ ಶಾಸಕ ಯು ಟಿ ಖಾದರ್ ಅವರನ್ನು ಕಟ್ಟಿ ಹಾಕಲು ಇತರ ಪಕ್ಷಗಳು ಸತತ ಪ್ರಯತ್ನ ನಡೆಸಿವೆ.
ಎಸ್ಡಿಪಿಐ ಪಕ್ಷ ಉಳ್ಳಾಲ ಕ್ಷೇತ್ರದಿಂದ ರಿಯಾಝ್ ಫರಂಗಿ ಪೇಟೆಯನ್ನು ಕಣಕ್ಕಿಳಿಸಿದೆ. ತಾಂಟ್ರೆ ಬಾ ತಾಂಟ್ ಭಾಷಣದ ಮೂಲಕ ಪ್ರಸಿದ್ಧಿಗೆ ಬಂದಿರುವ ರಿಯಾಝ್ ಎಸ್ಡಿಪಿಐ ಪಕ್ಷದ ಜನಪ್ರಿಯ ನಾಯಕ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಚಾಕಚಕ್ಯತೆ ಉಳ್ಳವರು. ಹೀಗಾಗಿ ಯು ಟಿ ಖಾದರ್ ವಿರುದ್ಧ ಎಸ್ಡಿಪಿಐ ಸಮರ್ಥ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದ್ದು, ಈ ಬಾರಿ ಉಳ್ಳಾಲವನ್ನು ಕರಾವಳಿಯಲ್ಲಿ ತನ್ನ ಗೆಲುವಿಗೆ ಮೆಟ್ಟಲನ್ನಾಗಿ ಮಾಡಬಹುದೇ ಎನ್ನುವ ಪ್ರಶ್ನೆ ಎದುರಾಗಿದೆ.ಈ ಬಾರಿ ಉಳ್ಳಾಲ ಕ್ಷೇತ್ರದ ಚುನಾವಣೆ ಇನ್ನಷ್ಟು ರೋಚಕವಾಗಿರಲಿದೆ.