ಪುತ್ತೂರು: ನಿನ್ನೆ ಸಂಜೆ ಭಾರೀ ಮಳೆಯಿಂದಾಗಿ ಪುತ್ತೂರು ಮಹಾಲಿಂಗೇಶ್ವರ ದೇವರ ಜಾತ್ರೆಯಲ್ಲಿದ್ದ ವ್ಯಾಪಾರ ಮಳಿಗೆಗಳಿಗೆ ಹಾನಿಯುಂಟಾಗಿದೆ.
ಭಾರೀ ಗಾಳಿ ಹಾಗೂ ಗುಡುಗು ಸಹಿತವಾಗಿ ಮಳೆಗೆ ಜಾತ್ರಾ ಗದ್ದೆಯಲ್ಲಿದ್ದ ವ್ಯಾಪಾರ ಮಳಿಗೆಗಳ ಶೀಟ್ಗಳು ಹಾರಿಹೋಗಿದ್ದು, ಗದ್ದೆಯ ತುಂಬ ನೀರು ನಿಂತು ವ್ಯಾಪಾರಿಗಳಿಗೆ ನಷ್ಟ ಉಂಟಾಗಿದೆ. ಪ್ರೇಕ್ಷಕರು ಮತ್ತು ಕಲಾವಿದರು ಗಾಳಿ ಮಳೆಗೆ ವೇದಿಕೆಯ ಸಭಾಂಗಣದಲ್ಲಿ ಆಶ್ರಯ ಪಡೆದರು. ದೇವಳದ ಗದ್ದೆಯ ಎದುರು ಭಾಗದ ಶ್ರೀ ಶಿವಪಾರ್ವತಿ ಸಾಂಸ್ಕೃತಿಕ ವೇದಿಕೆಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲಾಯಿತು.
ಭಾರೀ ಗಾಳಿಗೆ ದೇವಸ್ಥಾನದ ಮುಂಭಾಗದ ಗೋಪುರದ ಮೇಲೆ ಪ್ರಭಾವಳಿ ಮಾದರಿ ವಿದ್ಯುತ್ ದೀಪಾಲಂಕಾರಗಳು ಉರುಳಿ ಬಿದ್ದು ಕೆಳ ಭಾಗದಲ್ಲಿದ್ದ ಮಹಿಳೆಯರಿಗೆ ಗಾಯಗಳಾಗಿದೆ.ಪಾಂಗಾಳಾಯಿಯ ರೀತಾ, ನೆಹರು ನಗರದ ಹೇಮಾವತಿ ಗಾಯಗೊಂಡಿದ್ದು, ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕೆತ್ಸೆ ಪಡೆಯುತ್ತಿದ್ದಾರೆ. ಶಾಸಕ ಸಂಜೀವ ಮಠಂದೂರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ್ದಾರೆ.