

ಪುತ್ತೂರು: ಬರೋಬ್ಬರಿ 250 ಕೆ.ಜಿ. ಕಾಳು ಮೆಣಸನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೊಳ್ತಿಗೆ ಗ್ರಾಮದ ಕುದ್ಕುಳಿ ಮಹಮ್ಮದ್ ಶಾಫಿ ಎಂಬವರ ತೋಟದಲ್ಲಿರುವ ಗೋದಾಮಿನಿಂದ 10 ಗೋಣಿ ಚೀಲದಲ್ಲಿ ತುಂಬಿಸಿಟ್ಟಿದ್ದ 250 ಕೆ.ಜಿ. ಕಾಳು ಮೆಣಸನ್ನು ಆರೋಪಿಗಳು ಕಳವುಗೈದಿದ್ದರು.
ಬಂಧಿತ ಆರೋಪಿಗಳನ್ನು ಜಾಲ್ಸೂರು ಕಳಂಜಿ ನಿವಾಸಿ ಮಂಜು, ಸುಳ್ಯ ಕೊಡಿಯಬೈಲು ನಿವಾಸಿ ಪ್ರವೀಣ, ಜಾಲ್ಸೂರು ಬರ್ಪೆಡ್ಕ್ ನಿವಾಸಿ ಪವನ್ ಕುಮಾರ್, ಕೊಳ್ತಿಗೆ ನೀಟಡ್ಕ ನಿವಾಸಿ ಅಬ್ದುಲ್ ಬಾಶೀತ್ ಎಂದು ಗುರುತಿಸಲಾಗಿದೆ.

ಪ್ರಕರಣದ ತನಿಖೆ ನಡೆಸುತ್ತಿದ್ದ ಬೆಳ್ಳಾರೆ ಠಾಣಾ ಪೊಲೀಸು ಉಪನಿರೀಕ್ಷಕರು ಆರೋಪಿಗಳ ಬಗೆಗಿನ ಖಚಿತ ಮಾಹಿತಿ ಮೇರೆಗೆ ಅಡ್ಕಾರ ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ ಕಾರನ್ನು ನಿಲ್ಲಿಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ನಂತರ ಆರೋಪಿ ಪವನ್ ಕುಮಾರನ ಮನೆಯಲ್ಲಿ ಕಳವು ಮಾಡಿ ಬಚ್ಚಿಟ್ಟಿದ್ದ 10 ಗೋಣಿ ಕಾಳು ಮೆಣಸನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ. ಒಟ್ಟು ಮೌಲ್ಯ ರೂ 118750/- ಮತ್ತು ಕಾಳು ಮೆಣಸು ಸಾಗಾಟ ಮಾಡಲು ಉಪಯೋಗಿಸಿದ ಕಾರಿನ ಅಂದಾಜು ಮೌಲ್ಯ ರೂ 60,000/- ಆಗಿರುತ್ತದೆ. ಕೃತ್ಯದಲ್ಲಿ ಇನ್ನೊಬ್ಬ ಅಪ್ರಾಪ್ತ ಬಾಲಕನು ಭಾಗಿಯಾಗಿದ್ದಾನೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಆರೋಪಿಗಳಾದ ಮಂಜು ಬಿ, ಪ್ರವೀಣ, ಪವನ್ ಕುಮಾರ್, ಅಬ್ದುಲ್ ಬಾಶೀತ್ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಕಾರ್ಯಾಚರಣೆಯಲ್ಲಿ ದಕ್ಷಿಣ ಕನ್ನಡ ಪೊಲೀಸ್ ಅಧೀಕ್ಷಕರಾದ ಸೋನಾವಣೆ ರಿಷಿಕೇಶ್, ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರಚಂದ್ರ ಹಾಗೂ ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಡಾ. ಗಾನಾ ಕುಮಾರಿ ಪಿ ಆದೇಶದಂತೆ ನವೀನ್ಚಂದ್ರ ಜೋಗಿಪೊಲೀಸ್ ವೃತ್ತ ನಿರೀಕ್ಷಕರು ಸುಳ್ಯರವರ ಮಾರ್ಗದರ್ಶನದಲ್ಲಿ ರುಕ್ಮ ನಾಯ್ಕ್ ಹಾಗೂ ಸಿಬ್ಬಂದಿಗಳಾದ ಎಎಸ್ಐ ನಾರಾಯಣ, ಬಾಲಕೃಷ್ಣ, ನವೀನ್, ಸತೀಶ, ಪಿಸಿಗಳಾದ ಮಂಜುನಾಥ, ಚಂದ್ರಶೇಖರ, ಪ್ರವೀಣ ಕುಮಾರ್, ಶ್ರೀ ಶೈಲ, ಮಂಜುನಾಥ ಹೆಚ್ ಜೆ ಹಾಗೂ ವಾಹನದ ಚಾಲಕರಾದ ಪುರಂದರ ಭಾಗವಹಿಸಿರುತ್ತಾರೆ ಹಾಗೂ ಜಿಲ್ಲಾ ಗಣಕ ಯಂತ್ರದ ದಿವಾಕರ ಹಾಗೂ ಸಂಪತ್ ಭಾಗವಹಿಸಿದ್ದರೆ.

