

ಪುತ್ತೂರು: ಪುನರ್ನಿರ್ಮಾಣದ ವೇಳೆ ಹಲವು ವಿಸ್ಮಯಗಳಿಗೆ ಕಾರಣವಾದ ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಣಿಯ ಮಧ್ಯೆ ಇರುವ ಕಟ್ಟೆಯ ಕೆಳಭಾಗದ ವರುಣ ದೇವರ ವಿಗ್ರಹದ ಬಳಿ ಭೂಗರ್ಭದಲ್ಲಿ ನೀಲಿ ಮತ್ತು ಬಿಳಿ ಮಿಶ್ರಿತ ಹುಡಿ ಮಣ್ಣಿನೊಂದಿಗೆ ಅಂಟಿಕೊಂಡಿರುವುದು ಬೆಳಕಿಗೆ ಬಂದ ಮೂರೇ ದಿನದೊಳಗೆ ವರುಣ ದೇವರ ವಿಗ್ರಹದ ಪಾಣಿಪೀಠದ ಕೆಳಗಡೆ ಇನ್ನೊಂದು ದೊಡ್ಡದಾದ ಪಾಣಿಪೀಠ ಬೆಳಕಿಗೆ ಬಂದಿದೆ.
ದೇವಳದ ಪುಷ್ಕರಣಿಯ ಮಧ್ಯೆ ಇರುವ ಕಟ್ಟೆಯ ಪುನರ್ ನಿರ್ಮಾಣದ ಕೆಲಸ ಕಾರ್ಯ ನಡೆಯುತ್ತಿದ್ದು, ಸಂಪೂರ್ಣ ಶಿಲಾಮಯ ಕಟ್ಟೆಯನ್ನಾಗಿ ಮಾಡುವ ಸಂದರ್ಭ ಮಾ.27ರಂದು ಕೆರೆಯ ಮಧ್ಯ ಭಾಗದ ಕಟ್ಟೆಯ ಸುತ್ತ ಕಾಪರ್ ಡ್ರಾಜ್ ಮಾಡಿ ಒಳಗಿನ ನೀರನ್ನು ಹೊರತೆಗೆದಾಗ ವರುಣ ದೇವರ ವಿಗ್ರಹ ಬೆಳಕಿಗೆ ಬಂದಿತ್ತು. ಅದಾದ ಬಳಿಕ ವರುಣ ದೇವರ ವಿಗ್ರಹದ ಕಳಗಡೆ ಪಾಣಿಪೀಠ ಬೆಳಕಿಗೆ ಬಂದಿತ್ತು.ರಾತ್ರಿ ಕಟ್ಟೆಯ ನಾಲ್ಕು ಸ್ತಂಭಗಳನ್ನು ತೆರವು ಮಾಡಿ ಶಿಲಾಮಯ ಸ್ಥಂಭಗಳನ್ನು ಇಡಲು ಆಳವಾದ ಗುಂಡಿಯನ್ನು ತೋಡುವಾಗ ನೀಲಿ ಮತ್ತು ಬಿಳಿ ಮಿಶ್ರಿತ ಹುಡಿ ಬೆಳಕಿಗೆ ಬಂದಿತ್ತು.

ಇದೀಗ ಮಾ.31ರಂದು ಶ್ರೀ ವರುಣ ದೇವರ ವಿಗ್ರಹದ ಪಾಣಿಪೀಠದ ಕೆಳಗಡೆ ಇನ್ನೊಂದು ದೊಡ್ಡದಾದ ಪಾಣಿಪೀಠ ಇರುವುದು ಬೆಳಕಿಗೆ ಬಂದಿದೆ. ಇದರ ಜೊತೆ ಎದುರು ತಾಮ್ರದ ಸಣ್ಣ ಕರಡಿಗೆಯೂ ಪತ್ತೆಯಾಗಿದೆ. ಮಹಾಲಿಂಗೇಶ್ವರ ದೇವಸ್ಥಾನದ ಪುನರ್ ನಿರ್ಮಾಣ ಸಂದರ್ಭದಲ್ಲೂ ದೇವಳದ ಒಳಾಂಗಣದಲ್ಲಿ ಶಿಲಾ ಶಾಸನಗಳು, ಕೆತ್ತನೆ ಶಿಲ್ಪಗಳು, ಗರ್ಭಗುಡಿಯಲ್ಲಿ ಪ್ರಭಾವಳಿ, ರಾಜರ ಕಾಲದ ನಾಣ್ಯಗಳು ಪತ್ತೆಯಾಗಿದ್ದವು.
ಇದೀಗ ಪುಷ್ಕರಣಿಯ ಭೂಗರ್ಭದಲ್ಲಿ ಅಗೆದಷ್ಟು ಹೊಸ ಹೊಸ ವಿಸ್ಮಯಗಳು ಬೆಳಕಿಗೆ ಬರುತ್ತಿದೆ. ಕಟ್ಟೆ ಪುನರ್ ನಿರ್ಮಾಣ ಕಾರ್ಯಕ್ಕೆ ಸಂಬಂಧಿಸಿ ಶಿಲ್ಪಿ ಗುಣವಂತೇಶ್ವರ ಭಟ್, ಇಂಜಿನಿಯರ್ ರಘುರಾಮ ಭಟ್ ಮತ್ತು ದೇವಳದ ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್ ಅವರು ಪಾಣಿಪೀಠ ಗೋಚರ ಆಗುತ್ತಿದ್ದಂತೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಿಗೆ ಮಾಹಿತಿ ನೀಡಿದರು.
ಬಳಿಕ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಸದಸ್ಯರಾದ ರವೀಂದ್ರನಾಥ ರೈ ಬಳ್ಳಮಜಲು, ರಾಮದಾಸ್ ಗೌಡ, ರಾಮಚಂದ್ರ ಕಾಮತ್, ದೇವಳದ ಪ್ರಧಾನ ಅರ್ಚಕ ವೇ.ಮೂ.ವಸಂತ ಕೆದಿಲಾಯ, ಹರೀಶ್ ಭಟ್, ಉದಯ ಕೃಷ್ಣ ಭಟ್ ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಈ ಸಂದರ್ಭ ವಿದ್ಯಾ ಆರ್. ಗೌರಿ, ಗೌರಿ ಬನ್ನೂರು, ಜಯಶ್ರೀ ಎಸ್ ಶೆಟ್ಟಿ, ಅರ್ಪಣಾ, ಅಶೋಕ್ ಸಂಪ್ಯ, ರತ್ನಾಕರ ನಾಯಕ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.