ಪೊಲೀಸ್ ಅಧಿಕಾರಿ ಮೃತಪಟ್ಟ ಮೇಲೆ ಅನುಕಂಪದ ಆಧಾರದಲ್ಲಿ ಮಗನಿಗೆ ಮಕ್ಕಳ ಕಾನ್ಸ್ಟೇಬಲ್ ಈ ಹುದ್ದೆ ಲಭಿಸಿದ ಘಟನೆ ಛತ್ತೀಸ್ಗಢದ ಸರ್ಗುಜಾನಲ್ಲಿ ನಡೆದಿದೆ.
ಯುಕೆಜಿ ವಿದ್ಯಾರ್ಥಿ ಐದು ವರ್ಷದ ನಮನ್ ರಾಜ್ವಾಡೆ ಮಕ್ಕಳ ಕಾನ್ಸ್ಟೇಬಲ್ ಆಗಿ ನೇಮಕಗೊಂಡ ಬಾಲಕ. ಬಾಲಕನ ತಂದೆ ಪೊಲೀಸ್ ಅಧಿಕಾರಿ ರಾಜ್ಕುಮಾರ್ ರಾಜವಾಡೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಅವರ ಸಾವಿನ ಬೆನ್ನಲ್ಲೇ ಆಡಳಿತ ಮಂಡಳಿಯು ಬಾಲಕನನ್ನು ಮಕ್ಕಳ ಕಾನ್ಸ್ಟೇಬಲ್ ಆಗಿ ನೇಮಿಸಿದೆ.
ಮಗನಿಗೆ ಸಿಕ್ಕಿದ ಹೊಸ ಹುದ್ದೆಯ ಬಗ್ಗೆ ಮಾತನಾಡಿದ ನಮನ್ ತಾಯಿ ನಿತು ರಾಜ್ವಾಡೆ, ಪತಿ ಅಪಘಾತದಲ್ಲಿ ಸಾವನ್ನಪ್ಪಿದ್ದರಿಂದ ದಿಕ್ಕೇ ತೋಚದಂತಾಗಿತ್ತು. ಮಗನನ್ನು ಮಕ್ಕಳ ಕಾನ್ಸ್ಟೇಬಲ್ ಆಗಿ ನೇಮಕ ಮಾಡಿದ್ದಾರೆ. ಇದರಿಂದ ನನಗೆ ಖುಷಿಯಾಗಿದೆ ಎಂದಿದ್ದಾರೆ.
ಈ ನೇಮಕದ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸ್ ವರಿಷ್ಠಾಧಿಕಾರಿ ಭಾವನಾ ಗುಪ್ತಾ, ಆಡಳಿತ ಹಾಗೂ ಪೊಲೀಸ್ ಪ್ರಧಾನ ಕಚೇರಿಯ ಮಾರ್ಗಸೂಚಿಯನುಸಾರ ಈ ತೀರ್ಮಾನ ಕೈಗೊಳ್ಳಲಾಗಿದೆ. ಪೊಲೀಸ್ ಅಧಿಕಾರಿಯಾಗಿರುವವರು ಮೃತಪಟ್ಟ ಸಂದರ್ಭದಲ್ಲಿ ಅವರ ಕುಟುಂಬದಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿದ್ದರೆ ಅವರನ್ನು ಮಕ್ಕಳ ಕಾನ್ಸ್ಟೇಬಲ್ ಆಗಿ ನೇಮಿಸಲಾಗುತ್ತದೆ. ಇದೇ ಮಾದರಿಯಲ್ಲಿ ನಮನ್ನ ನೇಮಕಾತಿ ನಡೆದಿದೆ ಎಂದು ಮಾಹಿತಿ ಮೂಲಗಳು ತಿಳಿಸಿವೆ.