ಬೆಂಗಳೂರು: ಪ್ರೇಮಿಗಳ ದಿನದಂದೇ ನವದಂಪತಿಯನ್ನು ಯುವತಿಯ ಪಾಲಕರೇ ದೂರ ಮಾಡಿರುವ ಘಟನೆ ಬೆಂಗಳೂರಿನಲಲಿ ನಡೆದಿದೆ.
ಬೆಂಗಳೂರಿನ ನಿವಾಸಿಗಳಾದ ನಿಖಿಲ್ ರಾಜ್ ಮತ್ತು ಮಹಿಮಾ ದಂಪತಿ ಪ್ರೇಮಿಗಳ ದಿನದಲ್ಲಿ ಖುಷಿಯಿಂದ ಇರುವಾಗಲೇ ದೂರ ದೂರವಾಗಿದ್ದಾರೆ. ಎರಡು ತಿಂಗಳ ಹಿಂದಷ್ಟೇ ಪ್ರೀತಿಸಿ ವಿವಾಹವಾಗಿರುವ ಜೋಡಿಯನ್ನು ಮಹಿಮಾ ಅವರ ಪಾಲಕರೇ ಪ್ರತ್ಯೇಕ ಮಾಡಿರುವ ಆರೋಪ ಕೇಳಿಬಂದಿದೆ. ಮಗಳ ಮದುವೆಗೆ ವಿರೋಧ ಒಡ್ಡಿದ ಹಿನ್ನೆಲೆಯಲ್ಲಿ ಮಹಿಮಾ ಪಾಲಕರೇ ಮಗಳನ್ನು ಕಿಡ್ನ್ಯಾಪ್ ಮಾಡಿದ್ದಾರೆ ಎಂದು ಪತಿ ನಿಖಿಲ್ ದೂರಿದ್ದಾರೆ.
ಎರಡು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ ಇವರು ವಾರದ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮದುವೆಗೆ ಪಾಲಕರ ಭಾರಿ ವಿರೋಧವಿತ್ತು. ಮದುವೆಗೂ ಮುನ್ನ ತನ್ನ ಪಾಲಕರು ಮದುವೆಗೆ ಅಡ್ಡಿ ಪಡಿಸುತ್ತಿರುವುದಾಗಿ ಖುದ್ದು ಮಹಿಮಾ ಅವರೇ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಅಲ್ಲದೇ, ತಾವು ಸ್ವಇಚ್ಛೆಯಿಂದ ಮದುವೆಯಾಗಿದ್ದು, ಯಾರ ಬಲವಂತವೂ ಇಲ್ಲ ಎಂದೂ ಠಾಣೆಯಲ್ಲಿ ಹೇಳಿದ್ದರು. ನಂತರ ಇವರ ವಿವಾಹ ನೋಂದಣಿಯನ್ನೂ ಮಾಡಲಾಗಿತ್ತು. ಇದಕ್ಕೂ ಮುನ್ನ ಆಕೆಯ ತಂದೆಯನ್ನು ಪೊಲೀಸರು ಕರೆಸಿ ಮಾತುಕತೆ ನಡೆಸಿದ್ದರು. ಮಗಳು- ಅಳಿಯನಿಗೆ ತೊಂದರೆ ಕೊಡಬಾರದು ಎಂದೂ ಹೇಳಿದ್ದರು.
ಇದರ ನಡುವೆಯೂ ತಮ್ಮ ಪತ್ನಿಯನ್ನು ತಂದೆ ಅಪಹರಿಸಿದ್ದಾರೆ ಎಂದು ಪತಿ ಪೊಲೀಸರಲ್ಲಿ ದೂರು ನೀಡಿದ್ದಾರೆ. ಮನೆಗೆ ನುಗ್ಗಿ ಮಗಳನ್ನ ಕಿಡ್ನಾಪ್ ಮಾಡಿಕೊಂಡು ಹೋಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.