ಬಂಟ್ವಾಳ: ಕೆಲವು ದಿನಗಳ ಹಿಂದೆ ಬಂಟ್ವಾಳದ ಚಂಡ್ತಿಮಾರಿನಲ್ಲಿ ಕಾರು ಹಾಗೂ ಟ್ಯಾಂಕರ್ ಮಧ್ಯೆ ನಡೆದ ಅಪಘಾತದ ವೇಳೆ ಕಾಣೆಯಾದ 2.3 ಲಕ್ಷ ರೂ. ನಗದು ಹಾಗೂ ದಾಖಲೆ ಕಾಣೆಯಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದು, ಪ್ರಸ್ತುತ ಅದು ಕಾರಿನಲ್ಲೇ ಪತ್ತೆಯಾಗಿರುವುದರಿಂದ ಮನೆಯವರಿಗೆ ಸುರಕ್ಷಿತವಾಗಿ ಹಸ್ತಾಂತರಿಸಲಾಗಿದೆ.
ಜೂ. 1ರಂದು ಸಂಭವಿಸಿದ ಅಪಘಾತದಲ್ಲಿ ಮಡಂತ್ಯಾರು ನಿವಾಸಿ ಕಾರು ಚಾಲಕ ರೋಶನ್ ಸೆರವೋ ಮೃತಪಟ್ಟಿದ್ದು, ಕ್ಯಾಟರಿಂಗ್ ಉದ್ಯಮ ನಡೆಸುತ್ತಿದ್ದ ಅವರು ಹಿಂದಿನ ದಿನ ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮ ಹಣವನ್ನು ಪಡೆದು ಮನೆಗೆ ಹಿಂತಿರುಗುತ್ತಿದ್ದರು. ಕಾರು ಚಂಡ್ತಿಮಾರ್ ನಲ್ಲಿ ಅಪಘಾತಗೊಂಡ ಬಳಿಕ ಮನೆಯವರು ಪರಿಶೀಲನೆ ನಡೆಸಿದಾಗ ಹಣ ಹಾಗೂ ದಾಖಲೆ ಸಿಕ್ಕಿರಲಿಲ್ಲ. ಹೀಗಾಗಿ ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದರು.
ಕಾರಿನಲ್ಲಿ ನೂತನ ತಂತ್ರಜ್ಞಾನವಿದ್ದು, ಅಪಘಾತ ಸಂಭವಿಸಿದಾಗ ಡಾಶ್ ಬೋರ್ಡ್ ನ ಡ್ರಾಯರ್ ಒಳಗೆ ಮಗುಚಿಕೊಳ್ಳುತ್ತದೆ. ಹಾಗಾಗಿ ನಗದು, ದಾಖಲೆ ಪತ್ರ ಕಾಣಿಸಿರಲಿಲ್ಲ. ಪತ್ತೆಯಾದ ಕೂಡಲೇ ಅದನ್ನು ಬಂಟ್ವಾಳ ನಗರ ಠಾಣಾ ಅಪರಾಧ ವಿಭಾಗದ ಪಿಎಸ್ ಐ ಕಲೈಮಾರ್ ಅವರ ಮಾರ್ಗದರ್ಶನದಲ್ಲಿ ಅರುಣ್ ಪೆರ್ನಾಂಡಿಸ್ ಅವರು ರೋಶನ್ ಅವರ ಪತ್ನಿಗೆ ಹಸ್ತಾಂತರಿಸಿದರು.