
ಕೇಂದ್ರ ಗೃಹ ಸಚಿವ ಅಮಿತ್ ಶಾ ತಡರಾತ್ರಿ ಬೆಂಗಳೂರಿಗೆ ಆಗಮಿಸಿದ್ದಾರೆ. ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಬಂದ ಅಮಿತ್ ಶಾರನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿ ಹಲವು ಸಚಿವರು ಬರಮಾಡಿಕೊಂಡರು.
ಸದ್ಯ ತಾಜ್ ವೆಸ್ಟೆಂಡ್ನಲ್ಲಿ ವಾಸ್ತವ್ಯ ಹೂಡಿರುವ ಅಮಿತ್ ಶಾ, ಇಂದು ಕೇಂದ್ರ ಸಂಸ್ಕೃತಿ ಸಚಿವಾಲಯ ಆಯೋಜಿಸಿರುವ `ಸಂಕಲ್ಪ ಸೇ ಸಿದ್ದಿ’ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ. ಬಳಿಕ ಮಧ್ಯಾಹ್ನ ಯಲಹಂಕದ ಕೆಎಂಎಫ್ ಮದರ್ ಡೈರಿಗೆ ಭೇಟಿ ನೀಡಲಿದ್ದಾರೆ. ಸಂಜೆ ಅಷ್ಟೊತ್ತಿಗೆ ದೆಹಲಿಗೆ ವಾಪಸಾಗಲಿದ್ದಾರೆ.

ಕರಾವಳಿಯಲ್ಲಿ ಸರಣಿ ಕೊಲೆಗಳು, ಬಿಜೆಪಿ ಕಾರ್ಯಕರ್ತರ ಆಕ್ರೋಶ, ರಾಜೀನಾಮೆ ಕೊಟ್ಟ ಘಟನೆಗಳ ಬಗ್ಗೆ ಅಮಿತ್ ಶಾ ಅವರಿಗೆ ಸಿಎಂ ಬೊಮ್ಮಾಯಿ ಸಂಪೂರ್ಣ ವರದಿ ಸಲ್ಲಿಸಲಿದ್ದಾರೆ ಎನ್ನಲಾಗಿದೆ. ಪ್ರವೀಣ್ ಕೊಲೆ ಪ್ರಕರಣದ ಬಳಿಕ ಸರ್ಕಾರ ತೆಗೆದುಕೊಂಡ ನಿರ್ಧಾರಗಳು, ಪ್ರವೀಣ್ ನಿವಾಸಕ್ಕೆ ಭೇಟಿ ನೀಡಿ ಪರಿಹಾರ ವಿತರಿಸಿದ ವಿವರ, ತನಿಖೆಯ ಪ್ರಗತಿ, ಕಾರ್ಯಕರ್ತರ ಆಕ್ರೋಶದಿಂದ ದೊಡ್ಡಬಳ್ಳಾಪುರ ಸಮಾವೇಶ ಮುಂದೂಡಿದ್ದ ನಂತರದ ಬೆಳವಣಿಗೆಗಳ ಬಗ್ಗೆಯೂ ಅಮಿತ್ ಶಾ ಗಮನಕ್ಕೆ ತರಲಿದ್ದಾರೆ ಅಂತ ತಿಳಿದು ಬಂದಿದೆ.

ಅಮಿತ್ ಶಾ ಬರುತ್ತಿರುವುದರಿಂದ ಸಹಜವಾಗಿ ಬಿಜೆಪಿ ಪಾಳಯದಲ್ಲಿ ಸಂಚಲನ ಮನೆ ಮಾಡಿತ್ತು. ಇದೇ ಸಂದರ್ಭದಲ್ಲಿ ವರ್ಷ ತುಂಬಿಸಿದ ಸಂಪುಟ ಸಚಿವರ ಕುರಿತು ಸಿಎಂ ಬೊಮ್ಮಾಯಿಯವರಿಂದ ಅಮಿತ್ ಶಾ ಮಾಹಿತಿ ಪಡೆಯುತ್ತಾರೆ ಎನ್ನಲಾಗಿದೆ. ಸಚಿವರ ಸಾಧನೆಗಳ ರಿಪೋರ್ಟ್ ಕಾರ್ಡ್, ನಡವಳಿಕೆಯ ಟ್ರ್ಯಾಕ್ ರೆಕಾರ್ಡ್ ಬಗ್ಗೆ ಸಿಎಂ ಅಮಿತ್ ಶಾರಿಗೆ ವರದಿ ಕೊಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಸಚಿವರ ರಿಪೋರ್ಟ್ ಕಾರ್ಡ್ ಆಧರಿಸಿ ಹೈಕಮಾಂಡ್ ಯಾವ ಕ್ರಮ ಕೈಗೊಳ್ಳುತ್ತೋ ಅನ್ನೋ ಆತಂಕ ಸಚಿವರಲ್ಲಿ ಶುರುವಾಗಿದೆ.
