ಈವರೆಗೆ 9 ಚುನಾವಣೆಯನ್ನು ಎದುರಿಸಿರುವ ನನಗೆ ಹಿಂದೆದ್ದಕ್ಕಿಂತ ಅಧಿಕ ಉತ್ಸಾಹ ಈ ಬಾರಿ ನನಗಿದೆ – ಮಾಜಿ ಶಾಸಕ ಕೆ. ವಸಂತ ಬಂಗೇರ
ಬೆಳ್ತಂಗಡಿ: ತಾಲೂಕಿನ 81 ಗ್ರಾಮಗಳಲ್ಲಿ 241 ಬೂತ್ಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಸಕ್ರಿಯಗೊಳಿಸುವ ಕೆಲಸವಾಗುತ್ತಿದೆ. ಈವರೆಗೆ 9 ಚುನಾವಣೆಯನ್ನು ಎದುರಿಸಿರುವ ನನಗೆ ಹಿಂದೆದ್ದಕ್ಕಿಂತ ಅಧಿಕ ಉತ್ಸಾಹ ಈ ಬಾರಿ ನನಗಿದೆ ಎಂದು ಮಾಜಿ ಶಾಸಕ ಕೆ. ವಸಂತ ಬಂಗೇರ ಹೇಳಿದರು.
ಬೆಳ್ತಂಗಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರಕಾರ ಪ್ರಣಾಳಿಕೆಯಲ್ಲಿ ನೀಡಿರುವ ಆಶ್ವಾಸನೆಯನ್ನು ಈಡೇರಿಸಿದೆ. ಮುಂದಿನ ಬಾರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದರು. ಬೆಳ್ತಂಗಡಿಯಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು ಜನತೆ ಬೇಸತ್ತಿದ್ದಾರೆ. ಈ ಬಾರಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ನಮ್ಮ ಅಭ್ಯರ್ಥಿ, ರಕ್ಷಿತ್ ಶಿವರಾಂ ಅವರು ಮನೆ ಮನೆಯಲ್ಲಿ ಪ್ರಚಾರದಲ್ಲಿ ತೊಡಗಿದ್ದು, ಇದೇ ಏ. 17ರಂದು ನಾಮಪತ್ರ ಸಲ್ಲಿಕೆ ಕಾರ್ಯಕ್ರಮ ನಡೆಯಲಿದೆ ಎಂದರು. ಗುರುವಾಯನಕೆರೆಯ ಕಿನ್ಯಮ್ಮಯಾನೆ ಗುಣವತಿಯಮ್ಮ ಸಭಾಭವನದಲ್ಲಿ ಸೇರಿ 10 ಗಂಟೆಗೆ ಬಹಿರಂಗ ಚುನಾವಣೆ ಪ್ರಚಾರದ ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು.
ಸಭಾ ಕಾರ್ಯಕ್ರಮದಲ್ಲಿ ಕೆಪಿಸಿಸಿ ಮಾಧ್ಯಮ ವಕ್ತಾರ ನಿಕೇಶ್ ರಾಜ್ ಮೌರ್ಯ ಪ್ರಧಾನ ಭಾಷಣಗೈಯಲಿದ್ದಾರೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್, ಮಾಜಿ ಶಾಸಕ ಕೆ ವಸಂತ ಬಂಗೇರ, ಮಾಜಿ ಸಚಿವ ಗಂಗಾದರ ಗೌಡ, ಕೆ.ಪಿ.ಸಿ.ಸಿ ಸಂಯೋಜಕ ಶಾಹಿದ್ ತೆಕ್ಕಿಲ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು. ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಮಾತನಾಡಿ, ಗುರುವಾಯನಕೆರೆಯ ಕಿನ್ಯಮ್ಮಯಾನೆ ಗುಣವತಿಯಮ್ಮ ಸಭಾಭವನದಲ್ಲಿ ಬಹಿರಂಗ ಚುನಾವಣ ಪ್ರಚಾರ ಸಭೆಗೂ ಮುನ್ನ ಎಲ್ಲ ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಲಾಗುವುದು. ಸಭಾ ಕಾರ್ಯಕ್ರಮದಲ್ಲಿ ತಾಲೂಕು ಆಶ್ಚರ್ಯ ಪಡುವ ರೀತಿಯಲ್ಲಿ ಬಿಜೆಪಿ ಸದಸ್ಯರು ಸೇರ್ಪಡೆಗೊಳ್ಳಲಿರುವರು, ಸಭೆ ಮುಗಿದ ಅನಂತರ 25,000 ಮಂದಿಯನ್ನೊಳಗೊಂಡಂತೆ ಗುರುವಾಯನಕೆರೆ ಸಭಾಭವನದಿಂದ ಚುನಾವಣಾಧಿಕಾರಿ ಕಚೇರಿವರೆಗೆ ಹೆಜ್ಜೆ ಹಾಕಿ ನಾಮಪತ್ರ ಸಲ್ಲಿಸುವುದೆಂದು ತೀರ್ಮಾನಿಸಲಾಗಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಂಜನ್ ಜಿ. ಗೌಡ, ಶೈಲೇಶ್ ಕುಮಾರ್, ಪ್ರಮುಖರಾದ ಮನೋಹರ್ ಕುಮಾರ್ , ಸಲೀಂ ಗೇರುಕಟ್ಟೆ, ಈಶ್ವರ್ ಭಟ್, ರಾಜಶೇಖರ ಶೆಟ್ಟಿ ಉಪಸ್ಥಿತರಿದ್ದರು.