ಬೆಳ್ತಂಗಡಿ : ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಇಬ್ಬರು ಅಕ್ಕಪಕ್ಕದ ಮನೆಯ ಯುವತಿಯರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿ ನಡೆದಿದೆ.
ಮೃತಪಟ್ಟ ಯುವತಿಯರನ್ನು ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಪಟ್ಟೂರಿನ ಬಾಬು ಹಾಗೂ ಗೀತ ದಂಪತಿ ಪುತ್ರಿ ರಕ್ಷಿತಾ (22) ಮತ್ತು ಆಕೆಯ ನೆರೆಮನೆಯ ಶ್ರೀನಿವಾಸ ಆಚಾರಿ ಹಾಗೂ ಪಾರ್ವತಿ ದಂಪತಿ ಪುತ್ರಿ ಲಾವಣ್ಯ (20) ಎಂದು ಗುರುತಿಸಲಾಗಿದೆ.
ಇವರಿಬ್ಬರೂ ಕೂಡ ಕಳೆದೊಂದು ವರ್ಷದಿಂದ ಅನಾರು ಹಾಗೂ ಮುಂಡೂರುಪಳಿಕೆ-ಉಪ್ಪಾರಪಳಿಕೆ ವಲಯದ ಸೇವಾನಿರತೆಯರಾಗಿ ಕಾರ್ಯ ನಿರ್ವಹಿಸುತ್ತಿದ್ದು , ಇಬ್ಬರು ಉತ್ತಮ ಸ್ನೇಹಿತೆಯಾಗಿದ್ದರು. ಭಾನುವಾರ ರಕ್ಷಿತ ಹಾಗೂ ಲಾವಣ್ಯ ರವರಿಗೆ ಹೊಟ್ಟೆ ನೋವು ಕಾಣಿಸಿಕೊಂಡ ಕಾರಣ ಮನೆಯವರು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು.
ಆದರೆ ಚಿಕಿತ್ಸೆ ಫಲಿಸದೆ ಏಪ್ರಿಲ್ 6ರಂದು ಬೆಳಗ್ಗೆ ರಕ್ಷಿತಾ ಹಾಗೂ ಸಂಜೆ ಲಾವಣ್ಯ ಮೃತಪಟ್ಟಿದ್ದಾರೆ. ಇಬ್ಬರ ಹೊಟ್ಟೆನೋವಿಗೂ ನಿಖರ ಕಾರಣ ತಿಳಿದು ಬಂದಿಲ್ಲ . ವೈದ್ಯಕೀಯ ಪರೀಕ್ಷೆಯ ವರದಿ ನಂತರವೇ ತಿಳಿದು ಬರಬೇಕಿದೆ. ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಯುವತಿಯರ ಸಾವಿನ ಬಗ್ಗೆ ಅಸಹಜ ಸಾವು ಪ್ರಕರಣ ದಾಖಲಿಸಿದ್ದಾರೆ. ಒಂದೇ ದಿನ ಯುವತಿಯರಿಬ್ಬರು ಒಂದೇ ಕಾರಣಕ್ಕೆ ಸಾವಿನಪ್ಪಿರುವ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನಕ್ಕೆ ಕಾರಣವಾಗಿದೆ. ಆಹಾರದಲ್ಲಿ ಕಲಬೆರಕೆಯಾಗಿ ಮೃತಪಟ್ಟಿದ್ದಾರಾ ಎಂಬ ಬಗ್ಗೆ ಅನುಮಾನಗಳಿವೆ. ಇಬ್ಬರೂ ಸ್ನೇಹಿತೆಯರಿಗೆ ಯಾರದ್ದಾದರೂ ಬೆದರಿಕೆ ಇದ್ದು ಆತ್ಮಹತ್ಯೆ ಗೆ ಶರಣಾಗಿದ್ದಾರಾ ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ.
ಆದರೆ ನಿಖರವಾಗಿ ಈವರೆಗೂ ಸಾವಿಗೆ ಕಾರಣಗಳು ತಿಳಿದು ಬಂದಿಲ್ಲ . ಇಬ್ಬರ ಮನೆಯಲ್ಲೂ ಶೋಕ ಮಡುಗಟ್ಟಿದ್ದು , ಘಟನೆ ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದೆ.