ಬೆಳ್ತಂಗಡಿ : ಮೆದುಳಿನಲ್ಲಿ ರಕ್ತಸ್ರಾವ ಆಗಿ ಮೆದುಳು ನಿಷ್ಕ್ರಿಯಗೊಂಡ ಕಾರಣ ಸಾವನ್ನಪ್ಪಿದ ವ್ಯಕ್ತಿಯ ಅಂಗಾಂಗ ದಾನ ಮಾಡಲಾಗಿದೆ. ಮೃತರನ್ನು ಬೆಳ್ತಂಗಡಿ ತಾಲೂಕಿನ ಶಿಶಿಲದ ಆರ್ ಎಸ್ ಎಸ್. ಕಾರ್ಯಕರ್ತ ಸೂರ್ಯನಾರಾಯಣ ರಾವ್ (44) ಎಂದು ಗುರುತಿಸಲಾಗಿದೆ.
ಎ. 30ರಂದು ಸೂರ್ಯನಾರಾಯಣ್ ರಾವ್ ಮಂಗಳೂರಿನ ಡಾ ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿರುವ ಕೆಎಂಸಿ ಆಸ್ಪತ್ರೆ ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮೆದುಳು ನಿಷ್ಕ್ರಿಯಗೊಂಡಿತ್ತು. ಕುಟುಂಬದವರ ಒಪ್ಪಿಗೆಯಂತೆ ಅಂಗಾಂಗ ದಾನ ಪ್ರಕ್ರಿಯೆ ನಡೆಯಿತು. ಈ ಮೂಲಕ ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಅವರ ಪಿತ್ತಕೋಶವನ್ನು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ, ಒಂದು ಕಿಡ್ನಿ ಮತ್ತು ಚರ್ಮವನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ, ಒಂದು ಕಿಡ್ನಿಯನ್ನು ಎ.ಜೆ. ಆಸ್ಪತ್ರಗೆ, ಒಂದು ಕಣ್ಣನ್ನು ಅತ್ತಾವರದ ಕೆಎಂಸಿಗೂ ಮತ್ತೊಂದನ್ನು ಕೆ.ಎಸ್. ಹೆಗ್ಡೆ ಆಸ್ಪತ್ರೆಗೂ ರವಾನಿಸಲಾಯಿತು. ಅಂಗಾಂಗವನ್ನು ಝೀರೋ ಟ್ರಾಫಿಕ್ ಮುಖೇನ ಆಸ್ಪತ್ರೆಗಳಿಗೆ ರವಾನಿಸಲಾಗಿತ್ತು. ಕೆಎಂಸಿ ಆಸ್ಪತ್ರೆಯಿಂದ ಒಂದು ಲಿವರ್ ಅನ್ನು ಮಂಗಳೂರು ವಿಮಾನ ನಿಲ್ದಾಣದಿಂದ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಯಿತು.
ಕೆಎಂಸಿ ಆಸ್ಪತ್ರೆಯಿಂದ ಮಂಗಳೂರಿನ ಪೊಲೀಸರ ಸಹಕಾರದಿಂದ ಕೇವಲ 11 ನಿಮಿಷದಲ್ಲಿ ಅಂಬುಲೆನ್ಸ್ ಮುಖೇನ ವಿಮಾನ ನಿಲ್ದಾಣಕ್ಕೆ ಲಿವರ್ ಅನ್ನು ರವಾನಿಸಲಾಗಿತ್ತು. ಅಂಗಾಂಗ ದಾನ ಪ್ರಕ್ರಿಯೆಗೆ ಮಣಿಪಾಲ ಸಮೂಹ ಸಂಸ್ಥೆಯ ಕೆಎಂಸಿ ಮಂಗಳೂರು, ಮಣಿಪಾಲ ಹಾಗೂ ಬೆಂಗಳೂರು ಆಸ್ಪತ್ರೆಯ ನುರಿತ ತಜ್ಞರು ಹಾಗೂ ಎ.ಜೆ. ಆಸ್ಪತ್ರೆಯ ವೈದ್ಯರ ತಂಡ ಸಹಕರಿಸಿತ್ತು.