ಬೆಳ್ತಂಗಡಿ: ಆರು ತಿಂಗಳ ಹಿಂದೆ ರೋಗಿಗಳ ಸೋಗಿನಲ್ಲಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುತ್ತಾ ಚಿನ್ನಾಭರಣ ಕದ್ದು ಸಿಲಿಕಾನ್ ಸಿಟಿ ಸೇರಿದ್ದ ಖರ್ತನಾಕ್ ಕಳ್ಳಿಯನ್ನು ಧರ್ಮಸ್ಥಳ ಪೊಲೀಸರು ಪತ್ತೆ ಹಚ್ಚಿ ಚಿನ್ನಾಭರಣ ಸಹಿತ ಬಂಧಿಸಿದ್ದಾರೆ.
ಬೆಂಗಳೂರಿನ ಹೇಮಾ ಕುಟುಂಬದವರೊಂದಿಗೆ ಧರ್ಮಸ್ಥಳ ಪ್ರಕೃತಿ ಮತ್ತು ಯೋಗ ಚಿಕಿತ್ಸಾಲಯ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದು ಇವರ ಬಳಿ ಇದ್ದ 80 ಗ್ರಾಂ ತೂಕದ ಎರಡು ಹವಳದ ಚಿನ್ನದ ಮಾಂಗಲ್ಯ ಸರ ಹಾಗೂ 6000 ರೂಪಾಯಿ ನಗದು ಇದ್ದ ವ್ಯಾನಿಟಿ ಬ್ಯಾಗನ್ನು ಚಿಕಿತ್ಸೆಗೆ ಹೋಗಿದ್ದ ವೇಳೆಯಲ್ಲಿ ಕಳ್ಳತನ ಮಾಡಿದ್ದ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು .
ತನಿಖೆ ನಡೆಸಿದ ಪೊಲೀಸರು ಬಂಟ್ವಾಳ ಗ್ರಾಮದ ನಿವಾಸಿ ಆರೋಪಿ ಯುವತಿ ವರ್ಷಾ(26) ಎಂಬಾಕೆ ಬೆಂಗಳೂರಿನಲ್ಲಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಕಳ್ಳತನ ಮಾಡಿದ್ದ 65.ಗ್ರಾಂ ಚಿನ್ನಾಭರಣ ಸಹಿತ ವಶಪಡಿಸಿಕೊಂಡು, ಬೆಳ್ತಂಗಡಿ ನ್ಯಾ ಯಾಲಯಕ್ಕೆ ಹಾಜರುಪಡಿಸಲಾಗಿದ್ದು , 14 ದಿನಗಳವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕಳೆದ ಐದು ತಿಂಗಳಿಂದ ವಿಶೇಷ ಕರ್ತವ್ಯದಲ್ಲಿ ಧರ್ಮಸ್ಥಳ ಸಬ್ ಇನ್ಸ್ಸ್ಪೆಕ್ಟರ್ ಅನಿಲ್ ಕುಮಾರ್ ಅವರ ವಿಶೇಷ ತಂಡ ಬೆಂಗಳೂರಿನಲ್ಲಿ ಆಕೆಯನ್ನು ಬಂಧಿಸಿದೆ.ಚಿನ್ನದ ಅಂದಾಜು ಮೌಲ್ಯ ಅಂದಾಜು 2,50,000 ಆಗಿದೆ.
ಬೆಂಗಳೂರಿನಲ್ಲಿ ಕೆಲಸದಲ್ಲಿದ್ದ ಈಕೆ ಶೋಕಿ ಜೀವನಕ್ಕಾಗಿ ಕಳ್ಳತನಕ್ಕೆ ಇಳಿದಿದ್ದಳು. .ಆರೋಪಿ ವರ್ಷಾಳನ್ನು ಡಿಸೆಂಬರ್ 18 ರಂದು ದುಬೈಗೆ ಕಳುಹಿಸಿ ಕೆಲಸ ಮಾಡಲು ಮನೆಮಂದಿ ವಿಸಾ ಮಾಡಿಸಿದ್ದರು. ಇದೀಗ ಯುವತಿ ಕಳ್ಳತನ ಕೇಸ್ ನಲ್ಲಿ ಜೈಲು ಪಾಲಾಗಿದ್ದಾಳೆ.