ಬೆಳ್ತಂಗಡಿ: ಸೌತಡ್ಕ ದೇವಸ್ಥಾನಕ್ಕೆ ಬಂದಿದ್ದ ಭಕ್ತರೊಬ್ಬರ ಬ್ಯಾಗ್ ನಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಎಗರಿಸಿದ ಮಹಿಳೆಯನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಬಂಧಿತ ಆರೋಪಿಯನ್ನು ಗದಗ ಜಿಲ್ಲೆಯ ಕುಷ್ಟಗಿಚಾಲ್ ನಿವಾಸಿ ಭೀಮವ್ವ (63) ಎಂದು ಗುರುತಿಸಲಾಗಿದೆ.
ಶ್ರೀ ಕ್ಷೇತ್ರ ಸೌತಡ್ಕಕ್ಕೆ ದೇವರ ದರ್ಶನ ಪಡೆಯಲು ಬೆಳ್ತಂಗಡಿ ಮೂಲದ ಮುಂಬೈ ನಿವಾಸಿ ಬಾಲಚಂದ್ರ ಡಿ ಎಂಬುವವರು ಸಂಸಾರ ಸಮೇತ ಬಂದಿದ್ದರು. ಈ ವೇಳೆ ದೇವರ ದರ್ಶನ ಪಡೆದು ತೀರ್ಥ ಪ್ರಸಾದ ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದ ಸಮಯದಲ್ಲಿ ಬಾಲಚಂದ್ರ ಅವರ ಪತ್ನಿಯ ಕೈಯಲ್ಲಿದ್ದ ವ್ಯಾನಿಟಿ ಬ್ಯಾಗ್ ನ ಜಿಪ್ ತೆರೆದು ಅದರಲ್ಲಿದ್ದ ವಜ್ರದ ನೆಕ್ಲೇಸ್, ಎರಡು ಉಂಗುರ, ಒಂದು ಜೊತೆ ಜುಮುಕಿ ಸೇರಿ ಸುಮಾರು ಮೂರು ಲಕ್ಷ ಮೌಲ್ಯದ ಚಿನ್ನಾಭರಣವನ್ನು ಕಳವು ಮಾಡಲಾಗಿತ್ತು, ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸ್ ಅಧೀಕ್ಷಕ ಋಷಿಕೇಶ್ ಸೋನಾವಣೆ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ್ ಚಂದ್ರು ರವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡ ರಚಿಸಿ ಗದಗ ಮೂಲದ ಮಹಿಳೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಭೀಮವ್ವ ಅವಳ ಮೇಲೆ ಮುರುಡೇಶ್ವರ, ಭಟ್ಕಳ, ಸುಬ್ರಹ್ಮಣ್ಯ, ಸೇರಿ ಹಲವು ಕಡೆಗಳಲ್ಲಿ ಕಳ್ಳತನ ಪ್ರಕರಣ ದಾಖಲಾಗಿದೆ.