ಮಂಗಳೂರು: ನಗರದ ವಿವಿಧ ಕಡೆಗಳಲ್ಲಿ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಸರ ಸುಲಿಗೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಮಂಗಳೂರು ನಗರದ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಪಿಲಿಕುಲ ನಿಸರ್ಗಧಾಮ ನಗರದ ಜಗದೀಶ್(39), ಉರ್ವ ಸ್ಟೋರ್ ನಿವಾಸಿ ಸುಜಿತ್ ಶೆಟ್ಟಿ(40), ಮಂಗಳೂರಿನ ಪದವಿನಂಗಡಿ ನಿವಾಸಿ ಸುರೇಶ್ ರೈ(39) ಬಂಧಿತ ಆರೋಪಿಗಳು.
ಆರೋಪಿಗಳಿಂದ ಸುಲಿಗೆ ಮಾಡಿದ ಸುಮಾರು 90 ಗ್ರಾಂ ತೂಕದ ಚಿನ್ನಾಭರಣಗಳನ್ನು, 2 ಸ್ಕೂಟರ್ ಮತ್ತು 3 ಮೊಬೈಲ್ ಪೋನ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ವಶಕ್ಕೆ ಪಡೆದ ಸೊತ್ತುಗಳ ಒಟ್ಟು 5 ಲಕ್ಷ ಮೌಲ್ಯ ಎಂದು ಅಂದಾಜಿಸಲಾಗಿದೆ.
ಮಂಗಳೂರು ನಗರದಲ್ಲಿ ಆಗಸ್ಟ್ ತಿಂಗಳಲ್ಲಿ ಪೂರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2 ಸರ ಸುಲಿಗೆ ಪ್ರಕರಣ ಮತ್ತು ಕಂಕನಾಡಿ ಠಾಣಾ ವ್ಯಾಪ್ತಿಯಲ್ಲಿ 1 ಸರ ಸುಲಿಗೆ ಪ್ರಕರಣ ದಾಖಲಾಗಿತ್ತು. ಆಗಸ್ಟ್ 14ರಂದು ಮಂಗಳೂರು ಕದ್ರಿ ಆಳ್ವಾರಿಸ್ ರಸ್ತೆಯಲ್ಲಿ ಪುಣೆ ಮೂಲದ ಮಹಿಳೆಯ ಸರ ಕಳ್ಳತನ ಆಗಿದ್ದು, ಆಗಸ್ಟ್ 24ರಂದು ಕದ್ರಿ ಠಾಣೆ ವ್ಯಾಪ್ತಿ ಕುಲಶೇಖರ ಎವರೆಸ್ಟ್ ಪ್ಲಾಸ್ಟಿಕ್ ಪ್ಯಾಕ್ಟರಿಯ ರಸ್ತೆಯಲ್ಲಿ ಮಹಿಳೆಯ ಸರ ಸುಲಿಗೆ ಪ್ರಕರಣ ದಾಖಲಾಗಿರುತ್ತದೆ. ಹಾಗೂ ಆಗಸ್ಟ್ 25ರಂದು ಮಂಗಳೂರು ನಗರ ಕಂಕನಾಡಿ ಪೊಲೀಸ್ ಠಾಣೆಯ ಶಕ್ತಿನಗರದ ರಾಜೀವ ನಗರದಲ್ಲಿ ಮಹಿಳೆಯ ಸರ ಸುಲಿಗೆ ನಡೆದಿತ್ತು.
ಈ ಸರ ಸುಲಿಗೆ ಮಾಡಿದ ಆರೋಪಿಗಳ ಪತ್ತೆ ಬಗ್ಗೆ ಸಿಸಿಬಿ ಘಟಕದ ಪೊಲೀಸ್ ನಿರೀಕ್ಷಕರಾದ ಮಹೇಶ್ ಪ್ರಸಾದ್ ಮತ್ತು ಸಿಸಿಬಿ ಅಧಿಕಾರಿ, ಸಿಬ್ಬಂದಿಗಳು ಪತ್ತೆ ಕಾರ್ಯ ನಡೆಸಿ ಮಹಿಳೆಯ ಸರ ಸುಲಿಗೆ ಪ್ರಕರಣದಲ್ಲಿ ಭಾಗಿಯಾದ 3 ಜನ ಆರೋಪಿಗಳನ್ನು ಮಂಗಳೂರು ನಗರದ ಕಾರ್ ಸ್ಟ್ರೀಟ್ ಬಳಿ ಚಿನ್ನದ ಸರ ಮಾರಾಟ ಮಾಡಲು ಬಂದಾಗ ಮಾಹಿತಿ ಮೇರೆಗೆ ದಸ್ತಗಿರಿ ಮಾಡಿರುತ್ತಾರೆ.
ಆರೋಪಿಗಳ ಪೈಕಿ ಜಗದೀಶ್ ರಿಕ್ಷಾ ಚಾಲಕನಾಗಿದ್ದು, ಸುಜಿತ್ ಶೆಟ್ಟಿ ಪೈನಾನ್ಸ್ ವ್ಯವಹಾರ ನಡೆಸುತ್ತಿದ್ದಾನೆ. ಸುರೇಶ್ ರೈ ಟೆಂಪೋ ಚಾಲಕನಾಗಿರುತ್ತಾನೆ. ಸುಜಿತ್ ಶೆಟ್ಟಿ ಎಂಬಾತನು ಮಂಗಳೂರಿನಲ್ಲಿ 2002 ರಲ್ಲಿ ನಡೆದ ತ್ರಿವಳಿ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ.