ಮಂಗಳೂರು: ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಕೆ.ಎಸ್.ಎನ್.ರಾಜೇಶ್ ಭಟ್ಗೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ.
ವಕೀಲ ರಾಜೇಶ್ ಭಟ್ ಮೇಲೆ ತನ್ನದೇ ಕಚೇರಿಯಲ್ಲಿ ಇಂಟರ್ನ್ಶಿಪ್ ಮಾಡುತ್ತಿದ್ದ ಮಹಾರಾಷ್ಟ್ರ ಮೂಲದ ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ವ್ಯಕ್ತವಾಗಿತ್ತು. ಹಾಗಾಗಿ ರಾಜೇಶ್ ಭಟ್ ವಿರುದ್ಧ ಅ.18ರಂದು ಪೊಲೀಸರು ಪ್ರಕರಣ ದಾಖಲಿಸಿದ್ದರು. ಆ ಕ್ಷಣದಿಂದ ರಾಜೇಶ್ ಭಟ್ ತಲೆಮರೆಸಿಕೊಂಡಿದ್ದು, ಪೊಲೀಸರು ಸಾಕಷ್ಟು ಹುಡುಕಾಟ ನಡೆಸಿದ್ದರೂ ಪತ್ತೆಯಾಗಿರಲಿಲ್ಲ.
ಈ ಮಧ್ಯೆ ಸಂತ್ರಸ್ತ ಯುವತಿಯನ್ನು ದೂರು ನೀಡದಂತೆ ಬೆದರಿಸಿದ ಕಾರಣಕ್ಕೆ ಉರ್ವ ಪೊಲೀಸ್ ಠಾಣೆಯ ಎಸ್ಸೈ ಸಹಿತ ಇಬ್ಬರನ್ನು ಅಮಾನತುಗೊಳಿಸಲಾಗಿತ್ತು. ಅಲ್ಲದೆ ರಾಜೇಶ್ ಭಟ್ ಪರಾರಿಯಾಗಲು ಸಹಕರಿಸಿದ ಆರೋಪದಲ್ಲಿ ಇಬ್ಬರನ್ನು ಬಂಧಿಸಲಾಗಿತ್ತು. ಈ ಎಲ್ಲಾ ಬೆಳವಣಿಗೆಯ ಮಧ್ಯೆಯೇ ಬಾರ್ ಕೌನ್ಸಿಲ್ನಿಂದ ರಾಜೇಶ್ ಭಟ್ನನ್ನು ಅಮಾನತುಗೊಳಿಸಲಾಗಿತ್ತು. ಸಮಾರು ಎರಡು ತಿಂಗಳು ಕಾಲ ಆರೋಪಿ ರಾಜೇಶ್ ಭಟ್ ತಲೆಮರೆಸಿದ್ದ ಕಾರಣ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿಗೊಳಿಸಿದ್ದರು.
ಬಂಧನ ತಪ್ಪಿಸಲು ರಾಜೇಶ್ ಭಟ್ ಮಂಗಳೂರು ನ್ಯಾಯಾಲಯ ಹಾಗೂ ಬೆಂಗಳೂರು ಹೈಕೋರ್ಟ್ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದರೂ ತಿರಸ್ಕೃತಗೊಂಡಿತ್ತು. ಇದರಿಂದಾಗಿ ಆರೋಪಿ ರಾಜೇಶ್ ಭಟ್ ಡಿ.20ರಂದು ಮಂಗಳೂರು ಕೋರ್ಟ್ಗೆ ಶರಣಾಗಿದ್ದ. ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದರು. ಆದ್ರೆ ಅನಾರೋಗ್ಯ ಕಾರಣ ನೀಡಿ ರಾಜೇಶ್ ಆಸ್ಪತ್ರೆಗೆ ದಾಖಲಾಗಿದ್ದು, ಬಳಿಕ ಪೊಲೀಸರು ರಾಜೇಶ್ನನ್ನು ಕಸ್ಟಡಿಗೆ ತೆಗೆದುಕೊಂಡಿದ್ರು. ಇನ್ನು ರಾಜೇಶ್ಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿತ್ತು.