ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಇಂದು ಕರೆದಿರುವ ಶಾಂತಿ ಸಭೆಗೆ ಮುಸ್ಲಿಂ ಸಂಘಟನೆಯ ಮುಖಂಡರು ಬಹಿಷ್ಕಾರ ಹಾಕಿದ್ದರೆ ಇತ್ತ ಹಿಂದೂ ಸಂಘಟನೆಯ ಪ್ರಮುಖರು ಹಾಜರಾಗಲಿಲ್ಲ. ಆದರೂ ಕೆಲವೇ ಕೆಲವು ರಾಜಕೀಯ ಪಕ್ಷ ಹಾಗೂ ಸಮಾನ ಮನಸ್ಕ ಸಂಘಟನೆಯ ಉಪಸ್ಥಿತಿಯಲ್ಲಿ ಸಭೆ ನಡೆದಿದೆ.
ಸಭೆಯಲ್ಲಿ ಪ್ರಸ್ತಾಪವಾದ ಅಂಶಗಳು
ಬೀಟ್ ಕಮಿಟಿ ಮೀಟಿಂಗ್ಗಳು ಆಗಾಗ ಆಗಬೇಕು. ಕಾಟಚಾರಕ್ಕೆ ಮೀಟಿಂಗ್ಳು ಬೇಡ.ಮಂಗಳೂರಿನಲ್ಲಿ ಶಾಂತಿ ಸಭೆ ನಡೆದಂತೆ ಸುಳ್ಯ , ಪುತ್ತೂರು, ಬೆಳ್ಳಾರೆಯಲ್ಲಿ ನಡೆಯಬೇಕು. ಕೊಲೆಯಾದ ಮೂವರಿಗೂ ಸಮಾನ ಪರಿಹಾರ ನೀಡಬೇಕು. ಪ್ರಚೋದನಾತ್ಮಕ ಹೇಳಿಕೆ ನೀಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಮಾಧ್ಯಮಗಳು ಅಧಿಕೃತ ಸುದ್ದಿಗಳನ್ನು ಮಾತ್ರ ಬಿತ್ತರಿಸಬೇಕು. ಬೆಳ್ಳಾರೆಯಲ್ಲಿ ಲಾಠಿಚಾರ್ಜ್ ಪ್ರಕರಣದಲ್ಲಿ ಪೊಲೀಸರನ್ನು ಯಾಕೆ ವರ್ಗಾವಣೆ ಮಾಡಿದ್ದಾರೆ. ಆರೋಪಿಗಳಿಗೆ ಜೈಲಿನಲ್ಲಿ ನೀಡುವ ರಾಜಾಥಿತ್ಯ ನಿಲ್ಲಿಸಬೇಕು. ಸದ್ಯ ಸಂಜೆ 6 ನಂತರ ಇರುವ ನೈಟ್ ಕರ್ಫ್ಯೂವನ್ನು 8 ಗಂಟೆಗೆ ಏರಿಕೆ ಮಾಡಬೇಕು. ಪಬ್, ಬಾರ್ ಗಳನ್ನು ರಾತ್ರಿ ಸರಿಯಾದ ಸಮಯಕ್ಕೆ ಮುಚ್ಚುವಂತೆ ಮಾಡಬೇಕು ಎಂದು ಸಲಹೆಗಳನ್ನು ವಿವಿಧ ಪಕ್ಷ, ಸಂಘಟನೆ, ಸಮುದಾಯದ ಮುಖಂಡರು ನೀಡಿದರು.
ಶಾಂತಿ ಸಭೆಯ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಎಡಿಜಿಪಿ ಅಲೋಕ್ ಕುಮಾರ್, ಯಾವುದೇ ಪ್ರಕರಣದಲ್ಲಿ ನಾವು ಯಾರನ್ನೂ ಫಿಕ್ಸ್ ಮಾಡಲ್ಲ. ಬೀಟ್ ಕಮಿಟಿ ಹಾಗೂ ಮೊಹಲ್ಲಾ ಕಮಿಟಿಗಳ ಮೀಟಿಂಗ್ ನಡೆಯಲಿದೆ. ಮೊದಲ ಹಂತದಲ್ಲಿ ಪೊಲೀಸ್ ಇಲಾಖೆ, ಜಿಲ್ಲಾಡಳಿತದ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆದಿದೆ. ಮುಂದಿನ ವಾರದಿಂದ ಜನಪ್ರತಿನಿಧಿಗಳು ಸೇರಿ ಎಲ್ಲಾ ಹಂತದಲ್ಲಿ ಸಭೆ ನಡೆಯಲಿದೆ. ಜೊತೆಗೆ ಪ್ರಚೋದನಾಕಾರಿ ಭಾಷಣ ಮಾಡಿದವರ ವಿರುದ್ಧ ದೂರು ಬಂದರೆ ಕ್ರಮಕೈಗೊಳ್ಳುತ್ತೇವೆ. ಇಂಟರ್ನೆಟ್ ಬಂದ್ ಮಾಡುವುದಿಲ್ಲ ಬದಲಾಗಿ ನಿಯಂತ್ರ ಣ ಹೇರುತ್ತೇವೆ ಎಂದು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಹಾಗೂ ಎಡಿಜಿಪಿ ನೇತೃತ್ವದಲ್ಲಿ ನಡೆಯುತ್ತಿದ್ದ ಸಭೆಗೆ ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿತ್ತು. ಉಳಿದಂತೆ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವ, ಪಶ್ಚಿಮ ವಲಯ ಐಜಿಪಿ, ಎಸ್ಪಿ ಖುಷಿಕೇಶ್ ಸೋನಾವಣೆ, ಮಂಗಳೂರು ನಗರ ಪೊಲೀಸ್ ಕಮೀಷನರ್ ಸೇರಿ ಹಲವು ಅಧಿಕಾರಿಗಳು ಭಾಗಿಯಾಗಿದ್ದರು.