ವೃಂದಾವನಸ್ಥ ಪೂಜ್ಯ ಶ್ರೀ ಶ್ರೀ ಶ್ರೀ ವಿಶ್ವೇಶ ತೀರ್ಥ ಸ್ವಾಮಿಜಿಯವರ ಎರಡನೇ ಪುಣ್ಯತಿಥಿಯ ಅಂಗವಾಗಿ ಶಿವಳ್ಳಿ ಸ್ಪಂದನ ಮಂಗಳೂರು ಸಹಭಾಗಿತ್ವದಲ್ಲಿ ಜನವರಿ 2ರಂದು ಬೃಹತ್ ರಕ್ತದಾನ ಶಿಬಿರವನ್ನು ಕದ್ರಿಯಲ್ಲಿರುವ ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಯೋಜಿಸಿತು. ಈ ರಕ್ತದಾನ ಶಿಬಿರಕ್ಕೆ ರಕ್ತದಾನ ಮಾಡಲು ಸುಮಾರು 500 ಜನರು ಆಗಮಿಸಿದ್ದು ಇನ್ನೂರಕ್ಕೂ ಮಿಕ್ಕಿ ಜನರು ರಕ್ತದಾನ ಮಾಡಿದರು.
ಶಿವಳ್ಳಿ ಸ್ಪಂದನ ದೇರೇಬೈಲು ವಲಯದ ಸಹಭಾಗಿತ್ವದಲ್ಲಿ , ಭಾರತೀಯ ರೆಡ್ಕ್ರಾಸ್ ಸೊಸೈಟಿ ಇದರ ಸಹಯೋಗದೊಂದಿಗೆ ಪೇಜಾವರ ಶ್ರೀಗಳ ಪುಣ್ಯಸ್ಮರಣೆಗಾಗಿ ಆಯೋಜಿಸಿದ್ದ ಈ ರಕ್ತದಾನ ಶಿಬಿರವನ್ನು ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಹರೀಶ ಶೆಟ್ಟಿ ಉದ್ಘಾಟಿಸಿದರು.
ಬಳಿಕ ನಡೆದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ದ್ವಿತೀಯ ಸಂಸ್ಮರಣಾ ಕಾರ್ಯಕ್ರಮ ಕಾಲೇಜಿನ ಆಡಿಟೋರಿಯಂನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಉದ್ಯಮಿ ಶ್ರೀ ರಮೇಶ ರಾವ್, ಹಿರಿಯ ಜ್ಯೋತಿಷಿ ಶ್ರೀ ನವೀನ ಚಂದ್ರ ಭಟ್ ಅತಿಥಿಗಳಾಗಿ ಆಗಮಿಸಿದ್ದರು. ರೆಡ್ಕ್ರಾಸ್ನ ಹಿರಿಯ ವೈದ್ಯಾಧಿಕಾರಿ ಡಾ. ಜೆ ಎನ್ ಭಟ್ರಿಗೆ ಅವರ ನಿಸ್ವಾರ್ಥ ಸೇವೆಗಾಗಿ ಗೌರವಾಭಿನಂದನೆ ಸಲ್ಲಿಸಲಾಯಿತು. ನಂತರ ಮಾತನಾಡಿದ ಡಾ ಭಟ್, ರಕ್ತದಾನದ ಮಹತ್ವ ಹಾಗೂ ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದರ ಬಗ್ಗೆ ಎಲ್ಲರಿಗೂ ಕರೆ ನೀಡಿದರು. ಇದೇ ಸಂದರ್ಭದಲ್ಲಿ ನೀಟ್ ಪಿಜಿ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ 103ನೇ ರಾಂಕ್ ಗಳಿಸಿದ ಡಾ. ಶ್ರೀ ರಕ್ಷಾ ಅವರನ್ನೂ ಸನ್ಮಾನಿಸಲಾಯಿತು. ಹೊಸ ವರುಷದ ಈ ಸಂದರ್ಭದಲ್ಲಿ, ಶಿವಳ್ಳಿ ಸ್ಪಂದನದ ವರ್ಣಮಯ ಕ್ಯಾಲೆಂಡರನ್ನೂ ಬಿಡುಗಡೆಗೊಳಿಸಲಾಯಿತು.
ಪ್ರಾಸ್ತಾವಿಕ ಭಾಷಣ ಮಾಡಿದ ಶಿವಳ್ಳಿ ಸ್ಪಂದನ ತಾಲೂಕು ಕಾರ್ಯದರ್ಶಿ, ಶ್ರೀ ಗಣೇಶ ಹೆಬ್ಬಾರ್, ಸ್ವಾಮೀಜಿಯವರ ಸಮಾಜಸೇವೆಯೇ ಈ ರಕ್ತದಾನ ಶಿಬಿರಕ್ಕೆ ಪ್ರೇರಣೆ ಎಂದರು. ಶಿವಳ್ಳಿ ಸ್ಪಂದನ ಮಂಗಳೂರು ಅಧ್ಯಕ್ಷರಾದ ಶ್ರೀ ಕೃಷ್ಣ ಭಟ್ ಮಾತನಾಡಿ ಸಂಘಟನೆಯು ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದು, ಎರಡು ವರುಷಗಳ ಸಾಧನೆಗೆ ಸದಸ್ಯರನ್ನು ಅಬಿನಂದಿಸಿದರು. ಈ ಕಾರ್ಯಕ್ರಮದ ಆಯೋಜನೆಯ ನೇತೃತದವ ವಹಿಸಿದ್ದ ದೇರೇಬೈಲ್ ವಲಯದ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಎಲ್ಲರನ್ನೂ ಸ್ವಾಗತಿಸಿದರು. ದೇರೇಬೈಲ್ ವಲಯ ಕಾರ್ಯದರ್ಶಿ ಶ್ರೀ ರಘುರಾಮ ರಾವ್ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮವನ್ನು ಕುಮಾರಿಯರಾದ ಧನ್ಯಾ ಮತ್ತು ಪ್ರಾಪ್ತಿ ನಿರೂಪಿಸಿದರು.
ಬೆಳಿಗ್ಗೆಯಿಂದಲೇ ಮಂಗಳೂರು ನಗರ ಪ್ರದೇಶವಲ್ಲದೆ ತಲಪಾಡಿ, ಕಟೀಲು, ಕುಡುಪು, ಸುರತ್ಕಲ್ಗಳಿಂದ ಶಿವಳ್ಳಿ ಸ್ಪಂದನದ ಸದಸ್ಯರು ಉತ್ಸಾಹದಿಂದ ರಕ್ತದಾನ ಮಾಡಲು ಸರತಿಯಲ್ಲಿ ನಿಂತಿರುವುದು ಕಂಡು ಬಂದಿತು. ಕರ್ನಾಟಕ ಪಾಲಿಟೆಕ್ನಿಕ್ನ ಎನ್ ಎಸ್ ಎಸ್ ವಿದ್ಯಾರ್ಥಿಗಳ ಚುರುಕುತನ, ಸೇವೆಗೆ ಎಲ್ಲರಿಂದ ಶ್ಲಾಘನೆ ವ್ಯಕ್ತವಾಯಿತು. ಬಹಳಷ್ಟು ಜನರು ಕೆಂಪುರಕ್ತ ಕಣಗಳ ಕೊರತೆಯಿಂದಾಗಿ ರಕ್ತದಾನ ಮಾಡಲಾಗದೆ ನಿರಾಶರಾದುದೂ ಇದೆ. ಒಟ್ಟಿನಲ್ಲಿ ಪೇಜಾವರ ಶ್ರೀಗಳ ಸಮಾಜ ಸೇವೆಯ ನೆನಪಿಗಾಗಿ ಅವರ ಭಕ್ತವೃಂದ ಅತೀವ ಶ್ರದ್ಧೆಯಿಂದ ತಮ್ಮ ನೆಚ್ಚಿನ ಸ್ವಾಮೀಜಿಯ ಸ್ಮರಣೆಗಾಗಿ ನಡೆಸಿದ ಈ ಎರಡನೇ ವರ್ಷದ ರಕ್ತದಾನ ಶಿಬಿರವನ್ನು ಯಶಸ್ವಿಗೊಳಿಸಿದರು.