ಮಂಗಳೂರು: ನಗರದ ಮುಕ್ಕ ಪ್ರದೇಶದಲ್ಲಿ ಹುಚ್ಚು ನಾಯಿಗಳ ಕಾಟ ಅಧಿಕವಾಗಿದ್ದು , ಪರಿಣಾಮ ಅಲ್ಲಿನ ಜನತೆ ಆತಂಕಕ್ಕೆ ಒಳಗಾಗಿದ್ದಾರೆ. ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಮುಕ್ಕ, ಮಲ್ಲಮಾರ್ ,ದೊಂಬೇಲ್, ದೊಂಬೇಲ್ ಬೀಚ್, ಶರತ್ಬಾರ್ ರಸ್ತೆ ಸೇರಿದಂತೆ ಸುತ್ತಮುತ್ತ ಹುಚ್ಚು ನಾಯಿಗಳ ಕಾಟ ಅತಿರೇಕಕ್ಕೆ ಹೋಗಿದೆ ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಕೆಲದಿನಗಳ ಹಿಂದೆ, ಮಲ್ಲಮಾರ್ ಎಂಬಲ್ಲಿನ ನಿವಾಸಿ ಸಂತೋಷ್ ಎಂಬವರ ಮನೆಯೊಳಗೆ ಪ್ರವೇಶಿಸಿದ ಹುಚ್ಚು ನಾಯಿಯೊಂದು ಸಂತೋಷ್ ಹಾಗೂ ಅವರ ಪುತ್ರಿಯ ಮೇಲೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿತ್ತು . ಬಳಿಕ ಸ್ಥಳೀಯರು ಅವರಿಬ್ಬರನ್ನೂ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದ ರು. ಹುಚ್ಚು ನಾಯಿ ಕಡಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ಸಂತೋಷ್ ಅವರ ಪುತ್ರಿ ಕೈಯ ನರವೇ ತುಂಡಾಗಿತ್ತು ಹಾಗೂ ಈ ಘಟನೆಯ ಬಳಿಕ ಸ್ಥಳೀಯರು ಮನೆಬಾಗಿಲು ತೆರೆಯಲು ಭಯಪಡುವಂತಾಗಿದೆ. ಅಲ್ಲದೆ, ಮನೆಯಿಂದ ಹೊರಗಡೆ ಹೋಗಲು ಗುಂಪು ಗುಂಪಾಗಿ ತೆರಳಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.