ಮಂಗಳೂರು: ಕಂಬಳದ ವೇಗದ ಓಟಗಾರರಾಗಿ ಗಮನ ಸೆಳೆದಿದ್ದ ಮಿಜಾರು ಅಶ್ವತಪುರ ಶ್ರೀನಿವಾಸ ಗೌಡ ಇದೀಗ ಮಾಡೆಲಿಂಗ್ ರಂಗದಲ್ಲೂ ಮಿಂಚಲಾರಂಭಿಸಿದ್ದಾರೆ.
ಮಾಡೆಲಿಂಗ್ ಕ್ಷೇತ್ರದಲ್ಲಿ ಆಭರಣಗಳನ್ನು ತೊಟ್ಟು ಮಿಂಚುತ್ತಿದ್ದ ಹುಡುಗಿಯರ ಸ್ಥಾನವನ್ನು ಶ್ರೀನಿವಾಸ್ ಗೌಡ ತುಂಬಿದ್ದಾರೆ. ಓಟದ ಕೋಣದ ಜತೆ ಆಭರಣಗಳ ಅಲಂಕಾರದೊಂದಿಗೆ ನಗುಮೊಗದೊಂದಿಗೆ ನಿಂತ ಶ್ರೀನಿವಾಸ ಗೌಡ ಅವರ ದೊಡ್ಡ ಪ್ಲೆಕ್ಸ್ ಗಳು ಕರಾವಳಿಯಾದ್ಯಾಂತ ಕಾಣಿಸುತ್ತಿದೆ. ಕಂಬಳ ಕ್ಷೇತ್ರದಲ್ಲಿ 2-3 ವರ್ಷಗಳಿಂದ ಮಿಂಚು ಹರಿಸಿದ ಸಾಧಕ. ಎರಡು ವರ್ಷಗಳ ಹಿಂದೆ ಜಗತ್ತಿನ ವೇಗದ ಓಟಗಾರ ಉಸೇನ್ ಬೋಲ್ಟ್ ಸಾಧನೆಯನ್ನು ಮೀರಿಸುವ ವೇಗದಲ್ಲಿ ಶ್ರೀನಿವಾಸ್ ಗೌಡ ಕಂಬಳದ ಕೋಣಗಳ ಜೊತೆ ಓಡಿ ದೇಶ-ವಿದೇಶಗಳಲ್ಲಿ ಸದ್ದು ಮಾಡಿದ್ದರು.
ಕೈಬೆರಳುಗಳ ತುಂಬಾ ವೈವಿಧ್ಯಮಯ ಉಂಗುರಗಳು, ಕೈಗೊಂದು ಕಡಗ, ಬ್ರಾಸ್ ಲೈಟ್, ಪೆಂಡೆಂಟ್ ಸಹಿತ ಚಿನ್ನದ ಹಾರ ಹೀಗೆ ಪುರುಷರೂ ಸ್ವರ್ಣಾಲಂಕಾರ ಹೇಗೆ ಮಾಡಿಕೊಳ್ಳಬಹುದು ಎನ್ನುವುದಕ್ಕೆ ಮಾದರಿಯಾಗಿ ನಿಂತ ಶ್ರೀನಿವಾಸ ಗೌಡ ಅವರು ಹೂನಗೆ ಚೆಲ್ಲಿದ್ದಾರೆ. ಜತೆಗಿರುವ ಕಂಬಳದ ಕೋಣ ‘ಅಪ್ಪು’ ಮಿಜಾರು ಪ್ರಸಾದ್ ನಿಲಯದ ಶಕ್ತಿ ಪ್ರಸಾದ್ ಶೆಟ್ಟಿಯವರದ್ದಾಗಿದ್ದು, ಈಗಾಗಲೇ ಹಲವು ಪದಕಗಳನ್ನು ಗೆದ್ದಿದೆ.
ಜಾಹೀರಾತುಗಳಲ್ಲಿಯೂ ಕರಾವಳಿಯ ಪ್ರತಿಭೆಗಳನ್ನು, ಇಲ್ಲಿನ ಸೊಬಗು. ವೈಭವವನ್ನು ಎಲ್ಲೆಡೆ ಪರಿಚಯಿಸಬೇಕೆಂಬ ಉತ್ಸಾಹದಿಂದ ಹೊಸಪ್ರಯೋಗಕ್ಕೆ ಇಳಿದಿದ್ದೇವೆ.
ಉಡುಪಿಯ ನೇಯ್ಯ ಶಂಕರಪುರ ಮಲ್ಲಿಗೆ, ಅಡಕೆ ಕೃಷಿಯ ರೈತ ಹೀಗೆ ಹತ್ತು ಹಲವು ಪರಿಕಲ್ಪನೆಗಳನ್ನು ಪರಿಚಯಿಸಿದ್ದೇವೆ. ಕರಾವಳಿಯ ಸಾಧಕಿ ಸಿನಿ ಶೆಟ್ಟಿಯನ್ನೂ ಬಳಸಿಕೊಳ್ಳುತ್ತಿದ್ದೇವೆ. ಕರಾವಳಿಯ ಸಾಂಸ್ಕೃತಿಕ ವೈಭವ, ಪ್ರಾಕೃತಿಕ ಸೊಬಗು ಯಾವುದಕ್ಕೂ ಕಡಿಮೆಯಿಲ್ಲ ಎನ್ನುವುದನ್ನೂ ತೋರಿಸಿಕೊಡಬೇಕಿದೆ ಎಂದು ಆಭರಣದ ಮಹೇಶ್ ಕಾಮತ್ ಅಭಿಪ್ರಾಯ ಪಟ್ಟಿದ್ದಾರೆ.
ಈ ಬಗ್ಗೆ ಶ್ರೀನಿವಾಸ ಗೌಡ ಅವರು ಪ್ರತಿಕ್ರಿಯೆ ನೀಡಿದ್ದು, ಆರು ತಿಂಗಳ ಹಿಂದೆ ಫೋಟೊ ಶೂಟ್ ಮಾಡ್ಕೊಂಡಿದ್ದರು. ಆಭರಣ ಜುವೆಲ್ಲರಿಯ ಜಾಹೀರಾತು ಫೋಟೋದಿಂದ ಇಷ್ಟು ದೊಡ್ಡ ಪ್ರಚಾರ ಸಿಗುತ್ತೆ ಅಂದುಕೊಂಡಿರಲಿಲ್ಲ. ಕೋಣದ ಜೊತೆಗೆ ನಿಲ್ಲಿಸಿ ಫೋಟೊ ತೆಗೆಸಿದ್ದರು. ಕಂಬಳ ಓಟಗಾರನನ್ನು ಪ್ರಖ್ಯಾತ ಜುವೆಲ್ಲರಿ ಸಂಸ್ಥೆಯವರು ಪ್ರಚಾರಕ್ಕೆ ಬಳಸಿಕೊಂಡಿದ್ದು ತುಂಬ ಸಂತಸವಾಗಿದೆ ಎಂದು ಹೇಳಿದ್ದಾರೆ.