ಬೆಂಗಳೂರು: ಶಾಲೆ, ಕಾಲೇಜುಗಳಲ್ಲಿ ಕೋವಿಡ್ ಸೋಂಕು ಹೆಚ್ಚಾದರೆ ಸರ್ಕಾರಕ್ಕೆ ಶಾಲೆ, ಪರೀಕ್ಷೆ ನಿಲ್ಲಿಸುವ ಅಗತ್ಯ ಎದುರಾದರೆ ಅದಕ್ಕೆ ಬದ್ಧವಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು ವಸತಿ, ನವೋದಯ ಶಾಲೆಗಳಲ್ಲಿ ಸೋಂಕು ಕಂಡು ಬಂದಿರುವುದು ಆತಂಕ ತಂದಿದೆ.1-10 ತರಗತಿಯ ಸರ್ಕಾರಿ ಶಾಲೆಗಳಲ್ಲಿ ಸೋಂಕು ಕಂಡು ಬಂದಿಲ್ಲ. ಇದರಿಂದ ಮಕ್ಕಳಿಗೆ ತೊಂದರೆ ಆಗಿಲ್ಲ, ಚಿಕಿತ್ಸೆ ಕೊಡಲಾಗಿದೆ ಮುಂದಿನ ದಿನಗಳಲ್ಲಿ ಸೋಂಕು ಹೆಚ್ಚಳ ಆದ್ರೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದರು.
ಕೊರೊನಾ ಮಾರ್ಗಸೂಚಿಗಳನ್ನು ಕಠಿಣವಾಗಿ ಪಾಲಿಸುತ್ತೇವೆ, ನಾಳೆ, ನಾಡಿದ್ದು, ಸೋಂಕಿತ ವಸತಿ, ನವೋದಯ ಶಾಲೆಗಳಿಗೆ ಭೇಟಿ ಕೊಡ್ತೇನೆ. ಯಾರೂ ಕೂಡ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಯಾಕಂದ್ರೆ ಕೋವಿಡ್ ಮಕ್ಕಳ ಮೇಲೆ ಯಾವುದೇ ಪರಿಣಾಮ ಬೀರಲ್ಲ ಅಂತ ವರದಿಗಳು ಬಂದಿವೆ. ತಜ್ಞರು ಮೂರನೇ ಅಲೆ ಫೆಬ್ರವರಿ ಅಂತ್ಯಕ್ಕೆ ಬರಬಹುದು ಎಂದು ತಿಳಿಸಿದ್ದಾರೆ. ಪರೀಕ್ಷೆ ಸಂದರ್ಭದಲ್ಲಿ ಸೋಂಕು ಹೆಚ್ಚಾದರೆ ಅಗತ್ಯ ಕ್ರಮ ಕೈಗೊಂಡು ಪರೀಕ್ಷೆ ಮತ್ತು ಶಾಲೆಗಳನ್ನು ನಿಲ್ಲಿಸಲು ಬದ್ಧವಾಗಿದ್ದೇವೆ ಎಂದಿದ್ದಾರೆ.
ಇನ್ನು ಸರ್ಕಾರ ತಜ್ಞರ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಸಂಬಂಧಪಟ್ಟ ಜಿಲ್ಲಾಧಿಕಾರಿಗಳ ಜೊತೆಯೂ ಮಕ್ಕಳ ಸುರಕ್ಷತೆ ಬಗ್ಗೆ ಚರ್ಚಿಸಲಾಗಿದೆ. ಪರೀಕ್ಷೆ ಒಳಗಾಗಿ ಮಕ್ಕಳಿಗೂ ವ್ಯಾಕ್ಸಿನ್ ಬರುವ ಸಾಧ್ಯತೆ ಇದೆ ಗಾಬರಿಯಾಗೋದು ಬೇಡ. ಕೋವಿಡ್ ನಿಯಮಾವಳಿಯಂತೆ ಪರೀಕ್ಷೆ ನಡೆಸುತ್ತೇವೆ ಎಂದು ಹೇಳಿದ್ದಾರೆ.